ಶಿಗ್ಗಾವಿ: ತಾಲ್ಲೂಕಿನ ಕುಂದೂರ ಗ್ರಾಮದಲ್ಲಿ ಸೋಮವಾರ ನಡೆದ ಕೊಬ್ರಿ ಹೋರಿ ಬೆದರಿಸುವ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸಿತು.
ಕೊಬ್ರಿ ಹೋರಿ ಬೆದರಿಸುವ ಸ್ಪರ್ಧೆಗೆ ಬಂಕಾಪುರದ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಭಾಗವಹಿಸಲು ದೂರದ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಅಣ್ಣಿಗೇರಿ, ರಾಣೆಬೆನ್ನೂರ, ಬ್ಯಾಡಗಿ ಸೇರಿದಂತೆ ಹಲವು ಕಡೆಗಳಿಂದ ಬಂದಿದ್ದ ಹೋರಿಗಳಿಗೆ ಜೂಲ, ಗೆಜ್ಜೆ, ಬಲೂನುಗಳಿಂದ ಶೃಂಗರಿಸಲಾಗಿತ್ತು. ಒಂದಡೆ ಹೋರಿಗಳ ಮಾಲೀಕರು ಹೋರಿಗಳನ್ನು ಬೆದರಿಸುತ್ತಾ ಹೋಗುತ್ತಿದ್ದರೆ ಇನ್ನೊಂದಡೆ ಅವುಗಳನ್ನು ಹಿಡಿಯುವ ಸಾಹಸಕ್ಕೆ ಮುಂದಾಗುತ್ತಿದ್ದ ಯುವಕರ ಗುಂಪು ನೋಡುಗರನ್ನು ಒಂದು ಕ್ಷಣ ಬೆಚ್ಚಿ ಬೀಳಿಸುವಂತಿತ್ತು. ಅವಘಡ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಸುಮಾರು 30 ಹೋರಿಗಳಿಗೆ ಬೆಳ್ಳಿ, ಬಂಗಾರ, ಮೊಬೈಲ್, ಸ್ಟೀಲ್ ಟಾಕಿ ಸೇರಿದಂತೆ ವಿವಿಧ ಬಹುಮಾನಗಳನ್ನು ನೀಡಲಾಯಿತು. ಅಲ್ಲದೆ ವಿಶೇಷವಾಗಿ ಓಡುತ್ತಿರುವ ಹೋರಿಗಳನ್ನು ಬೆದರಿಸಿ ತಮ್ಮ ಪ್ರಾಣದ ಹಂಗು ತೊರೆದು ಕೊಬ್ರಿ ಸರಗಳನ್ನು ಹರಿಯುವ ನಾಲ್ಕು ಜನ ಯುವಕರಿಗೆ ಒಂದು ತೊಲಿ ಬೆಳ್ಳಿಯನ್ನು ಬಹುಮಾನವಾಗಿ ನೀಡಲಾಯಿತು.