ಬೆಂಗಳೂರು: ರೌಡಿ ಕೊರಂಗು ಕೃಷ್ಣನ ಸಹಚರ ನರಸಿಂಹ ಅಲಿಯಾಸ್ ಸಿಡಿ ನರಸಿಂಹ (29) ಮತ್ತು ಆತನ ಆರು ಮಂದಿ ಸಹಚರರನ್ನು ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ.
ಮಂಜ (28), ಚರಣ್ ಕುಮಾರ್ (21), ರಾಘವೇಂದ್ರ (19), ರವಿ ಕುಮಾರ್ (26), ಬಸವರಾಜ (40) ಮತ್ತು ಪ್ರಸನ್ನ ಕುಮಾರ್ (24) ಇತರೆ ಆರೋಪಿಗಳು.
ಬಂಧಿತರಿಂದ ಒಂದು ಆಟೊ, ಮೂರು ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎದುರಾಳಿ ಗುಂಪಿನ ಚೇತನ್ ಮತ್ತು ಆತನ ಸಹಚರರ ಮೇಲೆ ಹಲ್ಲೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು, ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿ ಶುಕ್ರವಾರ ರಾತ್ರಿ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಯಿತು ಎಂದು ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.