ಬೆಂಗಳೂರು: ತಿಲಕ್ನಗರದ 31ನೇ ಅಡ್ಡರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಕುಖ್ಯಾತ ರೌಡಿ ಖಲೀಲ್ ಪಾಷಾ ಅಲಿಯಾಸ್ ತರಕಾರಿ ಖಲೀಲ್ (46) ಹಾಗೂ ಆತನ ಸಹಚರರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ವೀವರ್ಸ್ ಕಾಲೊನಿಯ ರಾಯಪ್ಪ (32), ಕೆಂಗೇರಿಯ ಸಮೀವುಲ್ಲಾ (22), ಮಂಜುನಾಥ ಅಲಿಯಾಸ್ ಪಾಗಲ್ (24) ಹಾಗೂ ಶಂಕರ (23) ಇತರೆ ಆರೋಪಿಗಳು. ಬಂಧಿತರಿಂದ ನಕಲಿ ಪಿಸ್ತೂಲ್, ಐದು ನಕಲಿ ಗುಂಡುಗಳು, ಕೃತ್ಯಕ್ಕೆ ತಂದಿದ್ದ ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
32 ಪ್ರಕರಣಗಳ ಆರೋಪಿ: ಖಲೀಲ್ ವಿರುದ್ಧ ನಗರದ ಭಾರತಿನಗರ, ಬಸವನಗುಡಿ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ.