ಕೊಲಂಬೊ (ಐಎಎನ್ಎಸ್): ಶ್ರೀಲಂಕಾದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಕನಿಷ್ಠ 23 ಜನರು ಮೃತಪಟ್ಟಿದ್ದು, ಇತರ 15 ಮಂದಿ ಕಣ್ಮರೆಯಾಗಿದ್ದಾರೆ. ಜೊತೆಗೆ 68 ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ನಿರಾಶ್ರಿತರಾಗಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೇಶದಾದ್ಯಂತ ಕಳೆದ ಐದು ದಿನಗಳಿಂದಲೂ ತೀವ್ರ ಮಳೆ ಬೀಳುತ್ತಿದ್ದು, 15 ಸಾವಿರಕ್ಕೂ ಅಧಿಕ ಏಕರೆಗಳಲ್ಲಿ ಬತ್ತದ ಬೆಳೆ ಹಾನಿಗೊಂಡಿರುವುದಾಗಿ `ಕ್ಸಿನ್ಹುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.
11 ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಕ್ಷಣಾ ಕಾರ್ಯಕರ್ತರು ಪರದಾಡುತ್ತಿದ್ದಾರೆ. ನೌಕಾ, ವಾಯು ಹಾಗೂ ಭೂ ಸೇನಾಪಡೆ ಯೋಧರು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.