ಬಾಗಲಕೋಟೆ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳನ್ನು ಶುಕ್ರವಾರ ಡಿಜಿಪಿ ಅಮಾನತುಗೊಳಿಸಿದ್ದಾರೆ.
ಮುಧೋಳ ಸಿಪಿಐ ಸುರೇಶ ರೆಡ್ಡಿ, ಲೋಕಾಪುರ ಠಾಣೆ ಎಸ್.ಐ. ರಾಮಚಂದ್ರ ಚೌಧರಿ ಮತ್ತು ಕಾನ್ಸ್ಟೇಬಲ್ ಬುದ್ನಿ ಅಮಾನತುಗೊಂಡಿದ್ದಾರೆ.
ಕಳವು ಮಾಡಲಾದ ಸಿಮೆಂಟ್ ಅನ್ನು ಖರೀದಿಸಿರುವ ಪ್ರಕರಣದಿಂದ ಕೈಬಿಡಲು ಧಾರವಾಡದ ಮಂಜುನಾಥ ಎಂಬುವವರಿಗೆ ಪೊಲೀಸರು ರೂ.3 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಮಂಜುನಾಥ ಅವರಿಂದ ರೂ.2.75 ಲಕ್ಷ ನಗದು ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತರು ಬಂಧಿಸಿದ್ದರು.
ಲೋಕಾಯುಕ್ತರು ಎಸ್.ಐ ಅವರನ್ನು ಬಂಧಿಸಿ ಕರೆತರುತ್ತಿದ್ದ ಸಂದರ್ಭದಲ್ಲಿ ಎಸ್.ಐ ಸಂಬಂಧಿಕರು ಮತ್ತು ಕೆಲ ಸಾರ್ವಜನಿಕರು ಅಡ್ಡಗಟ್ಟಿ ಲೋಕಾಯುಕ್ತ ವಾಹನದ ಮೇಲೆ ಕಲ್ಲುತೂರಾಟ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.