ಬೆಂಗಳೂರು: ದ್ವಿಚಕ್ರ ವಾಹನ ಸವಾರನಿಂದ ಐನೂರು ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಮಡಿವಾಳ ಸಂಚಾರ ಠಾಣೆಯ ಇಬ್ಬರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.
ಸಂತೋಷ್ ಮತ್ತು ಶ್ರೀನಿವಾಸ ಅಮಾನತುಗೊಂಡವರು. ಕ್ಲೇವ್ ಡಿಸೋಜ ಎಂಬುವರು ಸೆ.14ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾನ್ಸ್ಟೆಬಲ್ಗಳು ಅಡ್ಡಗಟ್ಟಿದ್ದರು.ಮದ್ಯಪಾನ ಮಾಡಿರುವ ಬಗ್ಗೆ ತಪಾಸಣೆ ಮಾಡಿದ ಅವರು ಐನೂರು ರೂಪಾಯಿ ಲಂಚ ಪಡೆದು ಬಿಟ್ಟು ಕಳುಹಿಸಿದ್ದರು. ಆದರೆ ಅವರು ರಸೀದಿ ನೀಡಿರಲಿಲ್ಲ. ಈ ಬಗ್ಗೆ ಡಿಸೋಜ ಅವರು ಇ- ಮೇಲ್ ಮೂಲಕ ದೂರು ನೀಡಿದ್ದರು.
ಈ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದಾಗ ಸಂತೋಷ್ ಮತ್ತು ಶ್ರೀನಿವಾಸ್ ಲಂಚ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. `ಕ್ಲೇವ್ ಅವರನ್ನು ತಡೆದು ಸಿಬ್ಬಂದಿ ಲಂಚ ಪಡೆದಿದ್ದಾರೆ. ಆದರೆ ಅವರನ್ನು ಆಲ್ಕೋಮೀಟರ್ ಮೂಲಕ ತಪಾಸಣೆಗೆ ಒಳಪಡಿಸಿಲ್ಲ. ಎಸ್ಐ ದರ್ಜೆಯ ಅಧಿಕಾರಿಗೂ ವಿಷಯ ತಿಳಿಸಿಲ್ಲ~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.
`ಸಿಬ್ಬಂದಿ ಹಣ ಪಡೆದು ರಸೀದಿ ನೀಡದಿದ್ದರೆ ಅಥವಾ ಇತರ ತೊಂದರೆ ನೀಡಿದರೆ www.bangaloretrafficpolice.gov.in ವೆಬ್ಸೈಟ್ಗೆ ಬಂದು ಫೇಸ್ಬುಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ ದೂರು ನೀಡಬಹುದು~ ಎಂದು ಅವರು ಹೇಳಿದ್ದಾರೆ.