ಮುಳಬಾಗಲು: ರಾಜ್ಯದಲ್ಲಿಯೇ ಮುಳಬಾಗಲನ್ನು ಲಂಚರಹಿತ ಮಾದರಿ ತಾಲ್ಲೂಕನ್ನಾಗಿ ಮಾಡಲಾಗುವುದು ಎಂದು ಶಾಸಕ ಡಾ.ಜಿ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ತಾಯಲೂರು ಗ್ರಾಮದಲ್ಲಿ ಈಚೆಗೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಿಗೆ ಬರುವ ಜನರನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಹಣಕ್ಕಾಗಿ ಪೀಡಿಸಬಾರದು ಎಂದು ಎಚ್ಚರಿಸಿದರು.
ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳದಂತೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕು. ರೋಗ ಮುಕ್ತ ವಾತಾವರಣಕ್ಕಾಗಿ ಶ್ರಮಿಸಬೇಕು ಎಂದರು.
30ಕ್ಕೂ ಅಧಿಕ ಹೆರಿಗೆ ಪ್ರಕರಣಗಳು ದಾಖಲಾಗುವ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ಶಾಸಕರು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಮುಳಬಾಗಲು-ತಾಯಲೂರು-ಯಳಚೇಪಲ್ಲಿ ಮತ್ತು ವಿ.ಕೋಟೆ ಮಾರ್ಗದಲ್ಲಿ ಸಂಚರಿಸುವ ಜನರು ಪ್ರತಿನಿತ್ಯ ರಾಜ್ಯ ರಸ್ತೆ ಸಾರಿಗೆ ಬಸ್ನಲ್ಲಿ ಸಂಚರಿಸಬೇಕು ಎಂದರು.
ಮೆಥೋಡಿಸ್ಟ್ ಹಿರಿಯ ಪ್ರಾಥಮಿಕ ಶಾಲೆ, ಸಂಕಲ್ಪ ಮುಂದಾಳು ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಗಿಡಗಳನ್ನು ವಿತರಿಸಿದರು.
ಕೆಪಿಸಿಸಿ ಸದಸ್ಯ ಅಶೋಕ್ ಕೃಷ್ಣಪ್ಪ, ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನೀಲಕಂಠೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಟಿ.ಮುನಿಸ್ವಾಮಿಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ರಮಾನಂದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಸುಬಾಷ್ಕುಮಾರ್, ಜ್ಞಾನೇಶ್ವರ್, ಎ.ಎಸ್.ಶ್ರೀನಿವಾಸ್, ಉಪಾಧ್ಯಕ್ಷ ಶ್ರೀನಿವಾಸ್, ತೇಜೋಮೂರ್ತಿ, ರಂಗಸ್ವಾಮಿ, ಅಸ್ಲಾಂಪಾಷಾ, ಮಡಿವಾಳ ಪಾಪಣ್ಣ ಪಾಲ್ಗೊಂಡಿದ್ದರು.