ಗದಗ: ಹರಿಜನ, ಗಿರಿಜನ ಕೇರಿಗಳ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮಂಗಳವಾರ ಜಲ ನಿರ್ಮಲ ರಸ್ತೆ ಚರಂಡಿ ಯೋಜನೆ ಹಾಗೂ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನರಗುಂದ ಕ್ಷೇತ್ರದಲ್ಲಿ ಒಟ್ಟು 13 ಕೋಟಿ ರೂಪಾಯಿಗಳ ಅನುದಾನವನ್ನು ಹರಿಜನ ಕೇರಿಗೆ ವಿನಿಯೋಗ ಮಾಡಲಾಗಿದೆ ಎಂದರು.
1.30ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಲನಿರ್ಮಲ ರಸ್ತೆ ಚರಂಡಿ ಯೋಜನೆ ಹಾಗೂ ಗ್ರಾಮದ ಹರಿಜನ ಕೇರಿಯಲ್ಲಿ 15.5 ಲಕ್ಷ ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಕಾಮಗಾರಿ ಗುಣಮಟ್ಟ ಕಳಪೆ ಎಂದು ಕಂಡು ಬಂದಲ್ಲಿ ತಕ್ಷಣವೇ ಗಮನಕ್ಕೆ ತರಬೇಕು. ಈ ಕಾಮಗಾರಿಗಳು ಅಚ್ಚುಕಟ್ಟಾಗಿ ನಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.
ಜಿ.ಪಂ. ಅಧ್ಯಕ್ಷೆ ಚಂಬವ್ವ ಪಾಟೀಲ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗ್ವವ ಮಜ್ಜಿಗುಡ್ಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.