ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ಸಾಗಣೆ:ಸರ್ಕಾರದ ಖಜಾನೆಗೆ ಕನ್ನ

Last Updated 19 ಅಕ್ಟೋಬರ್ 2012, 9:40 IST
ಅಕ್ಷರ ಗಾತ್ರ

ಹರಿಹರ: ನಗರದ ತುಂಗಭದ್ರಾ ಸೇತುವೆ ಆಚೆ ಬದಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ಗುರುವಾರ ನೂತನ ಸೇತುವೆ ಕಾಮಗಾರಿಗಾಗಿ ಗುಂಡಿಗಳನ್ನು ತೆಗೆಯುತ್ತಿದ್ದ ಗುತ್ತಿಗೆದಾರರು ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ಖಾಸಗಿ ವ್ಯಕ್ತಿಗಳ ಟ್ರ್ಯಾಕ್ಟರ್‌ಗಳಿಗೆ ತುಂಬಿ ಸಾಗಿಸುವ ಮೂಲಕ ಸರ್ಕಾರಿ ಖಜಾನೆಗೆ ಕನ್ನ ಹಾಕಿದ್ದಾರೆ.

ಸೇತುವೆ ಗುತ್ತಿಗೆದಾರರು ತುಂಗಭದ್ರಾ ನದಿ ದಡದಲ್ಲಿ ಮರಳನ್ನು ಖಾಸಗಿಯರಿಗೆ ಕೊಡುತ್ತಿದ್ದಾರೆ ಎಂಬ ತಾಲ್ಲೂಕಿನಲ್ಲಿ ಮಿಂಚಿನಂತೆ ಹಬ್ಬಿತ್ತು. ಮಧ್ಯಾಹ್ನ 12ರಿಂದಲೇ ಜೆಸಿಬಿ ಯಂತ್ರದ ಮೂಲಕ ಸೇತುವೆ ಕಾಮಗಾರಿಗೆ ಅವಶ್ಯಕವಾದ ಗುಂಡಿ ತೆಗೆದು ಅದರಲ್ಲಿದ್ದ ಮರಳನ್ನು ಖಾಸಗಿಯವರಿಗೆ ನೀಡುವ ಕೆಲಸ ಪ್ರಾರಂಭಿಸಲಾಗಿತ್ತು ಎಂದು ಅಲ್ಲಿದ್ದ ಸ್ಥಳೀಯರು ಮಾಧ್ಯಮದವರಿಗೆ ತಿಳಿಸಿದರು.

ಈ ದೃಶ್ಯವನ್ನು ನೋಡಲು ನೂರಾರು ಜನ ಸೇತುವೆ ಮೇಲೆ ಸೇರಿದ್ದರು. ಕುರಿತು ತಾಲ್ಲೂಕು ಇಒ ಡಾ.ರಂಗಸ್ವಾಮಿ ಅವರನ್ನು  ಸಂಪರ್ಕಿಸಿದಾಗ ಅವರು ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಇದ್ದರು. ಮರಳು ತೆಗೆದು ಸಾಗಿಸುತ್ತಿರುವ ವಿಚಾರ ತಮಗೆ ತಿಳಿದಿಲ್ಲ. ನದಿ ಆಚೆ ಬದಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದಕ್ಕಾಗಿ ರಾಣೇಬೆನ್ನೂರಿನ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಈ ಕುರಿತು ಸಿಪಿಐ ಯು.ಎಚ್. ಸಾತೇನಹಳ್ಳಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ, ಮರಳುಗಾರಿಕೆ ಕುಮಾರಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವುದರಿಂದ ನಾವು ಅವರನ್ನು ವಿಚಾರಿಸಲು ಗಡಿ ಸಮಸ್ಯೆಯಾಗುತ್ತದೆ. ನಮ್ಮ ಕಣ್ಣೆದುರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರೂ ನಾವೇನು ಮಾಡಲು ಅಸಹಾಯಕರಾಗಿದ್ದೇವೆ. ಕಾನೂನನ್ನು ಮೀರಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಸಾಧ್ಯವಾದರೆ, ಕುಮಾರಪಟ್ಟಣ ಗ್ರಾಮಾಂತರ ಪಿಎಸ್‌ಐ ಭೀಮಣ್ಣ ಚೂರಿ ಅವರನ್ನು ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ನೀಡಿದರು.

ಅಷ್ಟೊತ್ತಿಗಾಗಲೇ ಗಜಗಾತ್ರದ ಜೆಸಿಬಿ ಯಂತ್ರ ನೂರಾರು ಟ್ರ್ಯಾಕ್ಟರ್‌ನಷ್ಟು ಮರಳನ್ನು ಸಾಗಿಸಿದ್ದವು. ಮರಳನ್ನು ತುಂಬಿಕೊಳ್ಳಲು ಸರತಿಯಲ್ಲಿ 75ಕ್ಕೂ ಹೆಚ್ಚು ಟ್ರ್ಯಾಕ್ಟರ್ ನಿಂತಿದ್ದವು. ಪಿಎಸ್‌ಐ ಭೀಮಣ್ಣ ಚೂರಿ ಅವರನ್ನು ಸಂಪರ್ಕಿಸಿದಾಗ, ಘಟನೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ್ದೇನೆ. ರಾಣೇಬೆನ್ನೂರಿನ ತಹಶೀಲ್ದಾರ್ ಅವರಿಂದ ಮರಳು ಸಾಗಿಸಲು ಪರವಾನಗಿ ತೆಗೆದುಕೊಂಡು ಬಂದು ನಂತರ ಗುಂಡಿ ತೆಗೆಯಬೇಕು ಎಂದು ತಾಕೀತು ಮಾಡಿ, ಮರಳು ಸಾಗಿಸುವುದನ್ನು ಬಂದ್ ಮಾಡಿಸಿದ್ದೇವೆ ತಿಳಿಸಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ಅಕ್ರಮವಾಗಿ ಸಾಗಿ ಸರ್ಕಾರದ ಖಜಾನೆಗೆ ಅನ್ಯಾಯವಾಗಿದೆ. ಹರಿಹರ ತಾಲ್ಲೂಕಿನ ಪೊಲೀಸರಿಗೆ ಕುಮಾರಪಟ್ಟಣ ಭಾಗದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ತಡೆಯಲು ಅಥವಾ ಬಂಧಿಸಲು ಕಾನೂನು ಪರಿಮಿತಿ ಅಡ್ಡ ಬರುತ್ತದೆ. ರಾಣೇಬೆನ್ನೂರು ತಾಲ್ಲೂಕಿನ ಕಟ್ಟಕಡೆಯ ಗ್ರಾಮದ ಕುಮಾರಪಟ್ಟಣದಲ್ಲಿ ಏನು ನಡೆಯುತ್ತಿದೆ ಎಂದು ತಾಲ್ಲೂಕು ಆಡಳಿತಕ್ಕೆ ಗೊತ್ತಾಗುವುದೇ ಇಲ್ಲ. ಈ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಹೊಸ ನೀತಿಗಳ ತುರ್ತು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT