ಮುಂಬೈ (ರಾಯಿಟರ್ಸ್): ಹಿರಿಯ ಆಟಗಾರರು ವಿಫಲರಾದ ಕಾರಣ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಸೋಲು ಅನುಭವಿಸುತ್ತಿದೆ ಎಂದು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದು, ವಿವಿಎಸ್ ಲಕ್ಷ್ಮಣ್ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದಿದ್ದಾರೆ.
`ಸಚಿನ್ ಈಗಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಾಹುಲ್ ದ್ರಾವಿಡ್ ಕೂಡಾ ನಿರಾಸೆ ಉಂಟುಮಾಡಿಲ್ಲ. ಆದರೆ ಲಕ್ಷ್ಮಣ್ ಇನ್ನೆಷ್ಟು ದಿನ ತಂಡದಲ್ಲಿ ಮುಂದುವರಿಯುವರೋ ಎಂಬುದು ತಿಳಿಯದು~ ಎಂದು ಮಾಜಿ ಆರಂಭಿಕ ಬ್ಯಾಟ್ಸ್ಮನ್ ಅನ್ಶುಮನ್ ಗಾಯಕ್ವಾಡ್ ನುಡಿದಿದ್ದಾರೆ.
`ಮೂವರು ಹಿರಿಯ ಆಟಗಾರರು ಒಟ್ಟಾಗಿ ವಿದಾಯ ಹೇಳುವುದು ಸರಿಯಲ್ಲ. ಏಕೆಂದರೆ ಯುವ ಆಟಗಾರರಿಗೆ ಸಲಹೆ ನೀಡುವಂತಹ ಹಿರಿಯರು ತಂಡದಲ್ಲಿರಬೇಕು. ಈ ಕಾರಣ ಒಬ್ಬೊಬ್ಬರೇ ನಿವೃತ್ತಿ ಪ್ರಕಟಿಸಬೇಕು~ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿಗೆ ಇನ್ನೊಂದು ಅವಕಾಶ ನೀಡಬೇಕೆಂಬುದು ಅವರ ಅಭಿಪ್ರಾಯ. ಇದಕ್ಕೆ ಮಾಜಿ ಆಟಗಾರರಾದ ಕಿರಣ್ ಮೋರೆ ಮತ್ತು ಸಂಜಯ್ ಮಾಂಜ್ರೇಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಪರ್ತ್ ಟೆಸ್ಟ್ ಪಂದ್ಯಕ್ಕೆ ಲಕ್ಷ್ಮಣ್ ಬದಲು ರೋಹಿತ್ ಶರ್ಮಗೆ ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.
`ಮೂರನೇ ಟೆಸ್ಟ್ನಲ್ಲಿ ಲಕ್ಷ್ಮಣ್ ಸ್ಥಾನದಲ್ಲಿ ಶರ್ಮ ಆಡಬೇಕು. ವಿರಾಟ್ಗೆ ಇನ್ನೊಂದು ಅವಕಾಶ ಲಭಿಸಬೇಕು~ ಎಂದು ಮಾಂಜ್ರೇಕರ್ `ಟ್ವಿಟರ್~ನಲ್ಲಿ ಬರೆದಿದ್ದಾರೆ.