ಕೃಷ್ಣರಾಜಪೇಟೆ: ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ಸ್ವಾಮಿಯ ಮಹಾರಥೋತ್ಸವವು ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶುಕ್ರವಾರ ವೈಭವದಿಂದ ನೆರವೇರಿತು.
ಮಾಘಶುದ್ಧ ಪೂರ್ಣಿಮೆಯ ದಿನವಾದ ಶುಕ್ರವಾರ ಬೆಳಿಗ್ಗೆ 11.30ಕ್ಕೆ ತಾಲ್ಲೂಕು ದಂಡಾಧಿ ಕಾರಿ ಡಾ.ಎಚ್.ಎಲ್.ನಾಗರಾಜು ಸರ್ವಾಲಂಕೃತ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾರಥೋತ್ಸ ವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ನೆರೆಯ ಮೈಸೂರು, ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಉಘೇ ಉಘೇ ಎಂಬ ಘೋಷದೊಂದಿಗೆ ತೇರಿಗೆ ಹಣ್ಣು ಜವನ ಎಸೆದು ಭಕ್ತಿಭಾವದಿಂದ ತೇರನ್ನೆಳೆದರು.
ಶ್ರೀರಂಗಪಟ್ಟಣದ ಡಾ.ಭಾನುಪ್ರಕಾಶ ಶರ್ಮ, ಪ್ರಧಾನ ಅರ್ಚಕ ಕೆ.ಆರ್.ಶ್ರೀಧರ್ ನೇತೃತ್ವದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿಗೆ ಕೃಷ್ಣ ಗಂಧೋತ್ಸವ, ಯಾತ್ರಾ ದಾನೋತ್ಸವ, ಮಂಟಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ, ಆಚರಣೆಗಳನ್ನು ನಡೆಸಲಾಯಿತು.
ನಾಡಕಚೇರಿಯ ಉಪ ತಹಶೀಲ್ದಾರ್ ಪುಟ್ಟರಾಜ ಸೂರ್ಯವಂಶ, ದೇವಾ ಲಯದ ಪಾರುಪತ್ತೇದಾರ್ ಎ.ಎನ್.ರಮೇಶ್, ಜಿ.ಪಂ ಸದಸ್ಯೆ ಗೌರಮ್ಮ ಶ್ರೀನಿವಾಸ್, ಮಾಜಿ ಸದಸ್ಯ ನಾಗೇಂದ್ರಕುಮಾರ್, ತಾ.ಪಂ ಸದಸ್ಯೆ ರೇಣುಕಾ ಕಿಟ್ಟು, ಮಾಜಿ ಸದಸ್ಯರಾದ ರಾಮಸ್ವಾಮಿ, ಪ್ರಭುದೇವೇಗೌಡ, ಎಂ.ಎನ್.ನಾಗೇಂದ್ರ, ದೇವಾಲಯ ಟ್ರಸ್ಟ್ ಅಧ್ಯಕ್ಷ ಶ್ರೀಕಂಠಸ್ವಾಮಿ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ನರಸಿಂಹಮೂರ್ತಿ, ತಾಲ್ಲೂಕು ಅಧ್ಯಕ್ಷ ರಘುರಾಮನಾಡಿಗ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.