ಬೆಂಗಳೂರು: ಮಕ್ಕಳು, ಹದಿಹರೆಯದವರು, ಯುವಕರು ಮತ್ತು ವಯಸ್ಸಾದವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬೇಕಾದರೆ ಮಕ್ಕಳು ತಮ್ಮ ಪ್ರತಿಯೊಂದು ಚಟುವಟಿಕೆಗಳನ್ನೂ ಸಂತೋಷದಿಂದ ಅನುಭವಿಸುವಂತೆ ಮಾಡಬೇಕು ಎಂದು ನಿಮ್ಹೋನ್ಸ್ನ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರು ಕರೆ ನೀಡಿದರು.
ಕರ್ನಾಟಕ ಹವ್ಯಾಸಿ ಆಪ್ತ ಸಮಾಲೋಚಕರ ವೇದಿಕೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಡುವ ಪ್ರತಿಯೊಂದು ಕೆಲಸವನ್ನೂ ಮಕ್ಕಳು ತನ್ಮಯತೆಯಿಂದ ಮಾಡುವಂತಹ ತರಬೇತಿ ನೀಡಿ, ಲಲಿತ ಕಲೆಗಳಲ್ಲಿ ಹವ್ಯಾಸ ಬೆಳೆಸಿಕೊಳ್ಳುವಂತೆ ಮಾಡಿದರೆ ಮುಂದೆ ಅವರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ ಎಂದು ಅವರು ಹೇಳಿದರು.
ವಿಶ್ವದಲ್ಲಿ ಶೇಕಡಾ 20 ರಷ್ಟು ಮಂದಿ ಒಂದಲ್ಲಾ ಒಂದು ರೀತಿಯ ಖಿನ್ನತೆಯಿಂದ ನರಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರತಿ ವರ್ಷ 3000, ಕರ್ನಾಟಕದಲ್ಲಿ 15 ಸಾವಿರ ಮತ್ತು ಭಾರತದಲ್ಲಿ 1.5 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಪೊಲೀಸ್ ಅಂಕಿ ಅಂಶಗಳು ತಿಳಿಸುತ್ತವೆ. ವಾಸ್ತವವಾಗಿ ದಾಖಲೆಯಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಇದರ 10 ಪಟ್ಟು ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಗರದ ಸ್ಪಂದನ ಅಸ್ಪತ್ರೆಯ ನಿರ್ದೇಶಕ ಡಾ.ಎಂ.ಶ್ರಿನಿವಾಸ, ಪ್ರಸನ್ನ ಆಪ್ತ ಸಲಹಾ ಕೇಂದ್ರದ ಹಿರಿಯ ಆಪ್ತ ಸಮಾಲೋಚಕರಾದ ಎ.ವಿಕ್ಟರ್ ಅವರನ್ನು ಸನ್ಮ್ಮಾನಿಸಲಾಯಿತು. ವೇದಿಕೆಯ ಅಧ್ಯಕ್ಷ.ಎನ್.ವಿಶ್ವರೂಪಾಚಾರ್ ಅಧ್ಯಕ್ಷತೆ ವಹಿಸಿದ್ದರು. ಸಿ.ಸಂಧ್ಯಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎ.ಶ್ರಿನಿವಾಸಮೂರ್ತಿ ವಂದಿಸಿದರು.