ಭೂಪಾಲ್, (ಪಿಟಿಐ): ದೇಶದ ಬ್ಯಾಂಕ್ ಲಾಕರ್ ಗಳಲ್ಲಿ ಇರಿಸಿರುವ ಕಪ್ಪು ಹಣದ ಬಗ್ಗೆ ಕ್ರಮ ಕೈಗೊಳ್ಳಲು ಗೋಪ್ಯದ ಅಧಿನಿಯಮ ಅಡ್ಡ ಬರುತ್ತಿದೆ ಎಂದು ರಿಜರ್ವ ಬ್ಯಾಂಕ್ ನ ಗವರ್ನರ್ ಡಿ. ಸುಬ್ಬರಾವ್ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬ್ಯಾಂಕ್ ಲಾಕರ್ ಗಳಲ್ಲಿರುವ ಕಪ್ಪು ಹಣದ ಸಮಸ್ಯೆಯ ಕುರಿತು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಆರ್ ಬಿ ಐ ಗೆ ಸಾಧ್ಯವಾಗದು. ಆದರೆ ಕೇಂದ್ರ ಸರ್ಕಾರ ಈ ಸಂಬಂಧ ಕ್ರಮ ಕೈಗೊಳ್ಳಬಹುದಾಗಿದೆ ಎಂದಿದ್ದಾರೆ.
ಸದ್ಯದ ಸ್ಥಿತಿಯಲ್ಲಿ, ಈಗ ಜಾರಿಯಲ್ಲಿರುವ ಗೋಪ್ಯದ ಅಧಿನಿಯಮಗಳ ಅನ್ವಯ ಭಾರತದ ಬ್ಯಾಂಕ್ ಗಳಲ್ಲಿನ ಲಾಕರ್ ಗಳಲ್ಲಿರುವ ಅಕ್ರಮ ಹಣ ಸಂಗ್ರಹಣೆಯ ಕುರಿತು ಆರ್ ಬಿ ಐ ಯಾವುದೇ ರೀತಿಯಲ್ಲಿ ಕ್ರಮ ಜರುಗಿಸುವಂತಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, ಕೇಂದ್ರ ಸರ್ಕಾರದ ಬಜೆಟ್ ಸಿದ್ಧಪಡಿಸುವಲ್ಲಿ ಆರ್ ಬಿ ಐಗೆ ಯಾವುದೇ ಬಗೆಯ ಪಾಲು ಇರುವುದಿಲ್ಲ, ಆದರೆ ಬ್ಯಾಂಕ್ ಗಳ ಆರ್ಥಿಕ ತುರ್ತು ಪರಿಸ್ಥಿತಿ ನಿರ್ವಹಣೆ ಅದರ ಜವಾಬ್ದಾರಿ ಎಂದಿದ್ದಾರೆ.
ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರ ನಿರ್ವಹಣೆ ತುಂಬಾ ಕಷ್ಟದ ಕೆಲಸ ಆದರೂ ಎಂಥದೇ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆರ್ ಬಿ ಐ ಸಮರ್ಥವಾಗಿದೆ ಎಂದು ಅವರು ತಿಳಿಸಿದ್ದಾರೆ.