ಬೆಂಗಳೂರು ಮಹಾನಗರ ಸಂಸ್ಥೆಗೆ ಬಸ್ ಪ್ರಯಾಣ ದರ ಏರಿಸುವ ಚಾಳಿ. ಇದರ ಜತೆಗೆ ದಿನದ ಹಾಗೂ ತಿಂಗಳ ಪಾಸುಗಳ ದರವನ್ನು ಸಹ ಏಕಾಏಕಿ ಹೆಚ್ಚು ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಿಸಿತುಪ್ಪವಾಗಿದೆ.
ಆಶ್ಚರ್ಯದ ಸಂಗತಿಯೆಂದರೆ ಮಾಸಿಕ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಲಾಟರಿ ಯೋಜನೆಯನ್ನು ರದ್ದುಗೊಳಿಸಿದೆ.
ಈ ಹಿಂದೆ ಲಾಟರಿ ಯೋಜನೆಯಿಂದ ಕೆಲವರಿಗಾದರೂ ಅದೃಷ್ಟ ಖುಲಾಯಿಸಿ ಒಂದಿಷ್ಟು ಲಾಭ ಸಿಗುತ್ತಿತ್ತು. ಆದರೆ ಆ ಅವಕಾಶ ಈಗ ಇಲ್ಲವಾಗಿದೆ. ಬಿಎಂಟಿಸಿ ಕೇವಲ ಲಾಭದ ಕಡೆಗೆ ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ.
ಆದ್ದರಿಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಪುನಃ ಲಾಟರಿ ಯೋಜನೆಯನ್ನು ಜಾರಿಗೆ ತಂದರೆ ಪ್ರಯಾಣಿಕರಿಗೆ ಕೊಂಚ ಸಮಾಧಾನವಾಗುವುದಲ್ಲವೇ?
-ಎಲ್. ಶಶಿಕುಮಾರ್
ಬಸ್ಗಳಲ್ಲಿ ರೇಡಿಯೊ ಕಿರಿಕಿರಿ ಏಕೆ?
ಸುಮಧುರ ಗೀತೆಗಳು ಕಿವಿಗೆ ಇಂಪಾಗಿರಬೇಕಾದರೆ ವಾಲ್ಯೂಮ್ (ಧ್ವನಿ) ಕಡಿಮೆ ಇಡಬೇಕು. ಹೆಚ್ಚಾದರೆ ಕರ್ಕಶವಾಗಿ ಕೇಳುಗರಿಗೆ ತಲೆಚಿಟ್ಟು ಹಿಡಿಯುತ್ತದೆ.
ಅನೇಕ ವೋಲ್ವೋ ಬಸ್ಗಳಲ್ಲಿ ಸಂಜೆ ವೇಳೆಯಲ್ಲಿ ರೇಡಿಯೋ ಆನ್ ಮಾಡಿ ಕರ್ಕಶವಾಗಿ ಕೇಳಿಸಲಾಗುತ್ತಿದೆ. ಇದು ಚಾಲಕನಿಗೆ ಖುಷಿ ನೀಡಬಹುದು.
ಆದರೆ ಕೆಲಸ ಕಾರ್ಯಗಳ ಒತ್ತಡದಿಂದ ಕಛೇರಿಯಿಂದ ಮನೆಗೆ ತೆರಳುವವರಿಗೆ ಹಿಂಸೆ ಆಗುತ್ತಿದೆ. ರೇಡಿಯೋ ಹಾಕಲಿ; ಆದರೆ ಮೆಲು ಧ್ವನಿ ಇಟ್ಟರೆ ಪ್ರಯಾಣಿಕರಿಗೂ ಹಿತಕರ ಅಲ್ಲವೇ?
-ರಮ್ಯಾ ಬೆಳ್ಳಾವೆ