ಹುಬ್ಬಳ್ಳಿ: ‘2014ರ ಲೋಕಸಭಾ ಚುನಾವಣೆಗಾಗಿ ಹೈಕಮಾಂಡ್ಗೆ ಹಣ ಸಂಗ್ರಹಿಸಿ ಕೊಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿ ಯಾಗಿರುವ ಬಳ್ಳಾರಿಯ ಲಾಡ್ ಸಹೋದರರನ್ನು ರಕ್ಷಿಸುತ್ತಿದ್ದಾರೆ’ ಎಂದು ಧಾರವಾಡದ ಸಮಾಜ ಪರಿತವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಶುಕ್ರವಾರ ಇಲ್ಲಿ ಆರೋಪಿಸಿದರು.
ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸಲ್ಲಿಸಿರುವ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸಿದ್ದರಾಮಯ್ಯ ಅವರಿಗೆ ನೈಜ ಬದ್ಧತೆ ಇದ್ದಿದ್ದರೆ ಸರ್ಕಾರದ 100 ದಿನಗಳ ಸಾಧನೆಯಲ್ಲಿ ಗಣಿ ಹಗರಣದ ಆರೋಪಿಗಳ ವಿರುದ್ಧ ಕೈಗೊಂಡ ಕ್ರಮವೂ ಸೇರುತ್ತಿತ್ತು ಎಂದರು.
ಲೋಕಸಭಾ ಉಪ ಚುನಾವಣೆ ಯಲ್ಲಿ ಕ್ರಿಮಿನಲ್ ಹಿನ್ನೆಲೆ ಇರುವ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಪಕ್ಷದ ರಾಜಕೀಯ ದಿವಾಳಿತನವನ್ನು ಬಿಂಬಿಸುತ್ತದೆ ಎಂದ ಅವರು, ಅಕ್ರಮ ಗಣಿಗಾರಿಕೆ ಕುರಿತಾದ ಕಲೆ ಮತ್ತು ವಿಜ್ಞಾನದ ಪಾಠವನ್ನು ಬಳ್ಳಾರಿಯಲ್ಲಿ ರೆಡ್ಡಿ ಪರಿವಾರಕ್ಕೆ ಹೇಳಿಕೊಟ್ಟ ಶ್ರೇಯಸ್ಸು ಅನಿಲ್ ಲಾಡ್ ಅವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ಉಕ್ಕಿನ ಕೋಟೆಗೆ ತುಕ್ಕು...
ಗಣಿ ಹಗರಣದಲ್ಲಿ ಹಿರಿಯ ಅಧಿಕಾರಿಗಳಾದ ಶಮೀಂ ಬಾನು ಹಾಗೂ ವಿಶ್ವನಾಥನ್ ಅವರ ಬಂಧನ ಐಎಎಸ್ ಅಧಿಕಾರಿಗಳು ಎಂಬ ಉಕ್ಕಿನ ಕೋಟೆಗೆ ತುಕ್ಕು ಹಿಡಿದಿರುವುದನ್ನು ಬಿಂಬಿಸುತ್ತದೆ ಎಂದು ಟೀಕಿಸಿದ ಅವರು, ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಬಾಕಿ ಇರುವಾಗಲೇ ಅವರಿಗೆ ಬೆಂಬಲ ಸೂಚಿಸಿರುವ ಐಎಎಸ್ ಅಧಿಕಾರಿಗಳ ಸಂಘದ ಕ್ರಮ ಖಂಡನೀಯ ಎಂದರು.