ಕಾರವಾರ/ಕುಮಟಾ: ಸಿಮೆಂಟ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು, ಸುಮಾರು 15 ಅಡಿ ಆಳಕ್ಕೆ ಬಿದ್ದುದರಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಕುಮಟಾ ತಾಲ್ಲೂಕಿನ ಮಿರ್ಜಾನ ಜಡ್ಡಿಕಟ್ಟೆ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ಬುಧವಾರ ನಡೆದಿದೆ.
ಮೃತಪಟ್ಟವರನ್ನು ಗದಗ ಜಿಲ್ಲೆ ಲಕ್ಕುಂಡಿಯ ರಿಯಾಜ್ (22), ಬೈಲೂರಿನ ಗಂಗವ್ವ (45) ಮತ್ತು ಬಸವರಾಜ (42), ಗದುಗಿನ ಜೈಬುಲ್ಲಾ (46) ಎಂದು ಗುರುತಿಸಲಾಗಿದೆ. ಲಾರಿ ಚಾಲಕ ದ್ಯಾಮಣ್ಣನಿಗೂ ಗಾಯವಾಗಿದ್ದು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪರಾರಿಯಾಗಿದ್ದಾನೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಇವರೆಲ್ಲರೂ ಗದಗ ಕಡೆಯಿಂದ ಮಂಗಳೂರು ಕಡೆ ಹೊರಟಿದ್ದ ಲಾರಿಯಲ್ಲಿ ಉಡುಪಿ ಸಂತೆಗೆ ಮೆಣಸಿನಕಾಯಿ ತೆಗೆದುಕೊಂಡು ಹೊರಟಿದ್ದರು.