ಹೊಸಕೋಟೆ: ಬೆಂಗಳೂರು ರಸ್ತೆಯ ಮೇಡಹಳ್ಳಿ ಬಳಿ ಭಾನುವಾರ ಲಾರಿ ಹಾಗೂ ಟ್ರಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಟ್ರಾಕ್ಟರ್ ಮಾಲೀಕ ಚಿತ್ತೂರು ಜಿಲ್ಲೆಯ ರವೀಂದ್ರನಾಯ್ಡು (45) ಹಾಗೂ ಚಾಲಕ ಮುನಿಕೃಷ್ಣ ನಾಯ್ಡು(50) ಮೃತಪಟ್ಟವರು.
ರವೀಂದ್ರನಾಯ್ಡು ತಮ್ಮ ಟ್ರಾಕ್ಟರ್ ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದರು. ವಾಹನ ಮಾರಾಟವಾಗದ ಕಾರಣ ಚಿತ್ತೂರಿಗೆ ವಾಪಸ್ ಹೊರಟಿದ್ದರು. ಹೆದ್ದಾರಿಯ ಮೇಡಹಳ್ಳಿ ಬಳಿ ಹೋಗುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಹಿಂಬದಿಯಿಂದ ಟ್ರಾಕ್ಟರ್ನ ಟ್ರೇಲರ್ಗೆ ಡಿಕ್ಕಿ ಹೊಡೆಯಿತು. ಆಗ ಕೆಳಕ್ಕೆ ಬಿದ್ದ ರವೀಂದ್ರನಾಯ್ಡು ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು.
ಬಿದ್ದು ಗಾಯಗೊಂಡ ಚಾಲಕ ಮುನಿಕೃಷ್ಣ ನಾಯ್ಡು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.