ಅಂಕೋಲಾ (ಉ.ಕ.ಜಿಲ್ಲೆ): ತಾಲ್ಲೂಕಿನ ಬಳಲೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಮಾರುತಿ ವ್ಯಾನ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ವ್ಯಾನಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು ಮೂವರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಮೃತರನ್ನು ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ಚಂದ್ರಿಹಿತ್ತಲ ಗ್ರಾಮದ ಚಾಲಕ ದಾಮೋದರ ನಾರಾಯಣ ಹರಿಕಂತ್ರ (35), ಈಶ್ವರ ಮಂಜಪ್ಪ ಹರಿಕಂತ್ರ (54), ಈಶ್ವರ ಮಂಜು ಹರಿಕಂತ್ರ (38), ರಾಜೇಶ ಶನಿಯಾರ ಹರಿಕಂತ್ರ (30) ಎಂದು ಗುರುತಿಸಲಾಗಿದೆ.
ರಾಮದಾಸ ಮುರ್ಡೇಶ್ವರ ಹರಿಕಂತ್ರ, ರಾಮಚಂದ್ರ ಶುಕ್ರ ಹರಿಕಂತ್ರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಗೋವಾದ ಬಾಂಬೋಲಿಮ್ಗೆ ಸಾಗಿಸಲಾಗಿದೆ. ಗೋವಿಂದ ನಾರಾಯಣ ಹರಿಕಂತ್ರ ಅವರು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುರ್ಡೇಶ್ವರದಲ್ಲಿರುವ ನಾಗಮಾಸ್ತಿ ದೇವರ ಕಾರ್ಯಕ್ರಮಕ್ಕೆ ದೇಣಿಗೆ ಸಂಗ್ರಹಿಸಲು ಕಾರವಾರಕ್ಕೆ ವ್ಯಾನಿನಲ್ಲಿ ಬರುತ್ತಿದ್ದಾಗ, ಈ ದುರ್ಘಟನೆ ನಡೆದಿದೆ. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.