ಹೊಸಕೋಟೆ: ಇಲ್ಲಿನ ರಾಂಪುರ ರಸ್ತೆಯ ಬಿದರಹಳ್ಳಿ ಕ್ರಾಸ್ ಬಳಿ ಮಂಗಳವಾರ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಜಸ್ತಾನ ಮೂಲದ ನರಸಿನಾಯ್(27) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟೈಲ್್ಸ ಹಾಕುವ ಕೆಲಸ ಮಾಡುತ್ತಿದ್ದ ನರಸಿನಾಯ್, ಸ್ನೇಹಿತನ ಜೊತೆ ಆವಲಹಳ್ಳಿ ಕಡೆ ಬರುವಾಗ ಎದರುಗಡೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಕೆಳಗೆ ಬಿದ್ದ ನರಸಿನಾಯ್ ಮೇಲೆ ಲಾರಿ ಚಕ್ರ ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಸ್ನೇಹಿತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರು.
ಪ್ರತಿಭಟನೆ: ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಉಬ್ಬು ನಿಮಿರ್ಸುವಂತೆ ಒತ್ತಾಯಿಸಿ ಜೆಸಿಬಿ ಯಂತ್ರ ತಂದು ರಸ್ತೆ ಅಗೆದು ಪ್ರತಿಭಟನೆ ನಡೆಸಿದರು. ಬಿದರಹಳ್ಳಿ ಕ್ರಾಸ್ ಬಳಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಅಪಘಾತಗಳು ಸಾಮಾನ್ಯವಾಗಿವೆ.
ಕ್ರಾಸ್ ಬಳಿಯೇ ಶಾಲೆ ಸಹ ಇರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉಬ್ಬು ನಿರ್ಮಿಸಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.