ಬೆಂಗಳೂರು: ಲಾಲ್ಬಾಗ್ನ ಕೆಂಪು ತೋಟದಲ್ಲಿ ಬುಧವಾರ ರಾತ್ರಿ ಗಂಧದ ಮರವನ್ನು ಕತ್ತರಿಸಿರುವ ಕಿಡಿಗೇಡಿಗಳು, ಮರದ ತುಂಡುಗಳನ್ನು ಸರಾಗವಾಗಿ ಕದ್ದೊಯ್ದಿದ್ದಾರೆ. 20 ದಿನಗಳ ಅಂತರದಲ್ಲಿ ಲಾಲ್ಬಾಗ್ ಆವರಣದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದ್ದು, ಭದ್ರತೆ ಬಿಗಿಗೊಳಿಸುವುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ತೋಟಗಾರಿಕೆ ಇಲಾಖೆ ನಿರ್ದೇಶಕರ ಕಚೇರಿ ಪಕ್ಕದಲ್ಲಿದ್ದ 14 ವರ್ಷದ ಹಳೆಯ ಗಂಧದ ಮರವನ್ನು ಬುಡದವರೆಗೆ ಕತ್ತರಿಸಿರುವ ದುಷ್ಕರ್ಮಿಗಳು, ಅಲ್ಲೇ ತುಂಡುಗಳನ್ನಾಗಿ ಮಾಡಿ ಕೊಂಡೊಯ್ದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕಳವಾದ ಮರದ ಮಾರುಕಟ್ಟೆ ಮೌಲ್ಯ ನಿಖರವಾಗಿ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ರಾತ್ರಿ ಪಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಇದ್ದರು. ಆದರೆ, ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರು ಹೇಳುವವರೆಗೂ ಗಂಧದ ಮರ ಕಳವಾಗಿರುವ ವಿಷಯ ಸಿಬ್ಬಂದಿಗೆ ಗೊತ್ತಿರಲಿಲ್ಲ. ಅಲ್ಲದೇ, ಕಿಡಿಗೇಡಿಗಳು ಅಷ್ಟು ಸಲೀಸಾಗಿ ಕಳವು ಮಾಡಿರುವುದನ್ನು ನೋಡಿದರೆ ಕೃತ್ಯದ ಹಿಂದೆ ಲಾಲ್ಬಾಗ್ ಸಿಬ್ಬಂದಿಯ ಕೈವಾಡವಿರುವ ಸಾಧ್ಯತೆ ಇದೆ’ ಎಂದು ಸಿದ್ದಾಪುರ ಪೊಲೀಸರು ಶಂಕಿಸಿದ್ದಾರೆ.
ನ.29ರ ರಾತ್ರಿಯೂ ಕಳವಿಗೆ ಯತ್ನಿಸಿದ್ದ ದುಷ್ಕರ್ಮಿಗಳು, ತುಂಡುಗಳನ್ನು ಸಾಗಿಸಲಾಗದೆ ಬಿಟ್ಟು ಹೋಗಿದ್ದರು.
ಭದ್ರತೆ ಬಿಗಿಗೊಳಿಸುತ್ತೇವೆ...
‘ಲಾಲ್ಬಾಗ್ ಒಟ್ಟು 242 ಎಕರೆ ವಿಸ್ತೀರ್ಣ ಹೊಂದಿದೆ. ಭದ್ರತೆ ದೃಷ್ಟಿಯಿಂದ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಶೀಘ್ರವೇ ಇಡೀ ಆವರಣಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಜತೆಗೆ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು. ಪ್ರಕರಣ ಸಂಬಂಧ ಸಿದ್ದಾಪುರ ಠಾಣೆಗೆ ದೂರು ಕೊಟ್ಟಿದ್ದೇನೆ. ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ’