ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಸಮರ ಸಾರಿರುವ ಅವರ ಮಾಜಿ ಕಾರು ಚಾಲಕ ಲೆನಿನ್ ಕುರುಪ್ಪನ್ ಸಲ್ಲಿಸಿರುವ ಅರ್ಜಿಯಲ್ಲಿ ಸರ್ಕಾರದ ಪರ ವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಆಗಿ ಎಸ್.ಪಿ.ಜಾದವ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಜಾದವ್ ಇಲ್ಲಿಯವರೆಗೆ ಲೆನಿನ್ ಪರ ವಕೀಲರಾಗಿದ್ದರು. ಜಾದವ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದ ಮಂಡಿಸುವ ಈ ಎಲ್ಲ ಪ್ರಕರಣಗಳಲ್ಲಿ ಲೆನಿನ್ ಅವರೇ ಜಾದವ್ಗೆ ಶುಲ್ಕ ನೀಡಬೇಕು ಎಂದೂ ಆದೇಶದಲ್ಲಿ ಷರತ್ತು ವಿಧಿಸಲಾಗಿದೆ. ರಾಸಲೀಲೆ ಪ್ರಕರಣದ ಕುರಿತು ಲೆನಿನ್ ಅವರೇ ದೂರು ದಾಖಲಿಸಿರುವುದು ಇಲ್ಲಿ ಉಲ್ಲೇಖಾರ್ಹ.