ಪುದುಚೆರಿ (ಪಿಟಿಐ): ರಾಷ್ಟ್ರದಲ್ಲಿರುವ ಎಲ್ಲಾ ಕಾವಲು ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್ಗಗಳ ಜಾಗದಲ್ಲಿ ರಸ್ತೆ ಮೇಲ್ಸೇತುವೆಗಳನ್ನು ಹಂತಹಂತವಾಗಿ ನಿರ್ಮಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಎಲ್ಲೆಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಿಸಲು ಸಾಧ್ಯವಿಲ್ಲವೋ ಅಂತಹ ಕಡೆಗಳಲ್ಲಿ ಸಬ್ ವೇ ನಿರ್ಮಿಸಲಾಗುವುದು. ಅದೂ ಆಗದಿದ್ದರೆ ಅಂತಹ ಲೆವೆಲ್ ಕ್ರಾಸಿಂಗ್ಗಳಿಗೆ ಕಾವಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಎರಡು ರಸ್ತೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸುವ ಜತೆಗೆ ಪುದುಚೆರಿ– ತಿರುಪತಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.
ಈ ಎರಡು ರಸ್ತೆ ಮೇಲ್ಸೇತುವೆಗಳನ್ನು ಒಂದು ವರ್ಷ ಅವಧಿಯೊಳಗೆ ನಿರ್ಮಿಸಲಾಗುವುದು. ನಂತರ ವಿವಿಧೆಡೆ ಇಂತಹ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.