ಮೈಸೂರು: `ಕಾಂಗ್ರೆಸ್ ಕೋಮುವಾದಿ ಪಕ್ಷವಲ್ಲ; ಜಾತ್ಯತೀತ ಪಕ್ಷ ನಿಜ. ಆದರೆ, ಪ್ರಗತಿಪರ ಲೇಖಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮೃದು ಧೋರಣೆ ತಳೆದಿದ್ದಾರೆ. ಸರ್ಕಾರದ ವಿರುದ್ಧ ನಮ್ಮ ಬದುಕಿನ ಭಾಗವಾದ ಪ್ರಾತಿನಿಧಿಕ ಧ್ವನಿ ಎತ್ತದೇ ಇರುವುದು ದುರಂತ' ಎಂದು ಪ್ರೊ.ಚಂದ್ರಶೇಖರ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ `ಹೊರಳು ದಾರಿಯಲ್ಲಿ ಕನ್ನಡ ಸಾಹಿತ್ಯ ಹುಡುಕಾಟದ ಹೊಸ ನೆಲೆಗಳು' ಕುರಿತು ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
`ಢುಂಢಿ ಕೃತಿ ರಚಿಸಿದ ಯೋಗೇಶ್ ಮಾಸ್ಟರ್ ಬಂಧನಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ್, ಪತ್ರಕರ್ತೆ ಗೌರಿ ಲಂಕೇಶ್ ಮಾತ್ರ ಇದ್ದರು. ಆದರೆ, ಬಿಜೆಪಿ ಸರ್ಕಾರವಿದ್ದರೆ ಅನೇಕ ಲೇಖಕರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಸಚಿವರಿಗೆ ಘೇರಾವ್ ಹಾಕುತ್ತಿದ್ದರು. ಧರಣಿ, ನಡೆಸುತ್ತಿದ್ದರು.
ಕಾಂಗ್ರೆಸ್ ಸರ್ಕಾರದ ಹತ್ತಿರ ಸುಳಿದಾಡುವ ಲೇಖಕರು ಹೆಚ್ಚಿರುವುದರಿಂದ ಪ್ರತಿಭಟನೆ ಕುರಿತು ಮಾತನಾಡುತ್ತಿಲ್ಲ. ಏಕೆಂದರೆ ಅಕಾಡೆಮಿ, ಪ್ರಾಧಿಕಾರದ ರಚನೆ ಶೀಘ್ರದಲ್ಲಿ ನಡೆಯುವುದರಿಂದ ಸರ್ಕಾರದ ವಿರುದ್ಧ ಸೊಲ್ಲೆತ್ತುತ್ತಿಲ್ಲ. ಇದರಲ್ಲಿ ಪ್ರಗತಿಪರ, ಬಂಡಾಯ ಸಾಹಿತಿಗಳೂ ಸೇರಿದ್ದಾರೆ' ಎಂದು ಆರೋಪಿಸಿದರು.
ಚಡ್ಡಿಯೇ ಮೋಕ್ಷಕ್ಕೆ ಮೂಲ.....
ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಅವರು `ಚಡ್ಡಿಯೇ ಮೋಕ್ಷಕ್ಕೆ ಮೂಲ' ಎಂದು ಅರಿತುಕೊಂಡಿದ್ದಾರೆ. ಮುಖ್ಯವಾಗಿ ತಾವು ಚಡ್ಡಿ (ಆರ್ಎಸ್ಎಸ್) ಪರ ಎಂದು ಘೋಷಿಸಿದ್ದಾರೆ. ಅವರ ಹಾಗೆ ಅನೇಕ ಲೇಖಕರು ಪಾರದರ್ಶಕತೆ ತೋರಿಸುವುದಿಲ್ಲ ಎಂದು ಟೀಕಿಸಿದರು.