ಶ್ರೀರಂಗ ವೇದಿಕೆ (ಶ್ರೀರಂಗಪಟ್ಟಣ): ಬಣ್ಣ, ಬಣ್ಣದ ಲೇಸರ್ ಕಿರಣಗಳಲ್ಲಿ ಮೂಡಿ ಬಂದ ಕರ್ನಾಟಕದಲ್ಲಿ ಸಾಧನೆ ಮಾಡಿದ ಸಾಧಕರ, ಸಾಧನೆಗಳು ದಾರದ ಎಳೆಗಳಂತಿದ್ದ ಕಿರಣಗಳಲ್ಲಿ ಮೂಡಿ ಬಂದಾಗ ನೆರೆದಿದ್ದ ಪ್ರೇಕ್ಷಕರಲ್ಲಿ ರೋಮಾಂಚನಗೊಂಡರು. ಹೊಸ ಲೋಕವೊಂದಕ್ಕೆ ಕಾಲಿಟ್ಟ ಅನುಭವ ಪಡೆದರು.
ಶರಣರು, ಸಂತರು, ಸೂಫಿಗಳು, ಕದಂಬ, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಮಹಾರಾಜರು ಹಿಡಿದು ಇಂದಿನ ಮಾಹಿತಿ ತಂತ್ರಜ್ಞಾನದವರೆಗೆ ನಡೆದು ಬಂದ ಕರ್ನಾಟಕದ ವೈಭವವನ್ನು ಶ್ರೀರಂಗಪಟ್ಟಣದ ದಸರಾ ಉತ್ಸವದ ಎರಡನೇ ದಿನವಾದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಪ್ರದರ್ಶಿಸಿದ `ಲೇಸರ್ ಷೋ~ ಪ್ರೇಕ್ಷಕರ ಮನಸೂರೆಗೊಂಡಿತು.
ಪಂಪನಿಂದ ಹಿಡಿದು ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ ಅವರ ಸಾಧನೆ, ವಿವಿಧ ರಾಜರ ಸಾಮ್ರಾಜ್ಯಗಳ ಆಳ್ವಿಕೆ, ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ, ನಾಡು, ನುಡಿ, ಸಂಸ್ಕೃತಿ, ಆಡಳಿತದಲ್ಲಾದ ಸುಧಾರಣೆಗಳನ್ನು ಲೇಸರ್ ಕಿರಣಗಳು ಪರದೆಯ ಮೇಲೆ ಮೂಡಿಸಿದರು.
ರನ್ನ, ಪಂಪ, ಬಸವಣ್ಣನವರ ವಚನ ಸಾಹಿತ್ಯ, ಕನಕದಾಸರ ಕೀರ್ತನೆ, ಶಿಶುನಾಳ ಶರೀಫ್ರ ತತ್ವ ಪದಗಳು ಮನ ತಟ್ಟಿದವು.
ಸ್ವಾತಂತ್ರ್ಯದ ಹೋರಾಟದ ವಿವಿಧ ಮಜಲು, ಕರ್ನಾಟಕ ಏಕೀಕರಣದ ಹಾದಿ, ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲು ಕಾರಣರಾದ ವಿವಿಧ ಸಾಧಕರ ಹಾಗೂ ಕರ್ನಾಟಕ ಹಿರಿಮೆಯನ್ನು ದೇಶ, ವಿದೇಶಕ್ಕೂ ಹಬ್ಬಿಸಿದ ಹಿಂದೂಸ್ತಾನಿ ಸಂಗೀತದ ಗಾರುಡಿಗರ ಭಾವಚಿತ್ರಗಳು ಮೂಡಿ ಬರುತ್ತಿದ್ದಂತೆಯೇ ನೆರೆದಿದ್ದ ಜನರು ಘೋಷಣೆ ಕೂಗುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ನಿರ್ದೇಶನ ಹಾಗೂ ಪರಿಕಲ್ಪನೆಯಲ್ಲಿ ಮೂಡಿ ಬಂದಿತು.