ಭೋಪಾಲ (ಐಎಎನ್ಎಸ್): ಬುಡಕಟ್ಟು ವಿದ್ಯಾರ್ಥಿಯೊಬ್ಬನಿಂದ ತಮ್ಮ ಬೂಟಿನ ಲೇಸ್ ಕಟ್ಟಿಸಿಕೊಂಡು ಭಾರಿ ಟೀಕೆಗೆ ಗುರಿಯಾಗಿದ್ದ ಮಧ್ಯ ಪ್ರದೇಶದ ಸಹಕಾರಿ ಸಚಿವ ಗೌರಿ ಶಂಕರ್ ಬಿಸೆನ್ ಭಾನುವಾರ ಕ್ಷಮೆ ಯಾಚಿಸಿದ್ದಾರೆ. ಇನ್ನು ಮುಂದೆ ಲೇಸ್ಗಳೇ ಇಲ್ಲದ ಬೂಟುಗಳನ್ನು ಧರಿಸಲು ನಿರ್ಧರಿಸುವುದಾಗಿ ಮಾಧ್ಯಮದ ಮುಂದೆ ವಾಗ್ದಾನ ಮಾಡಿರುವ ಅವರು, ಈಗಾಗಲೇ ಇಂತಹ ಆರು ಜೊತೆ ಬೂಟುಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದಾರೆ.
`ವೈದ್ಯರು ನನಗೆ ಬಗ್ಗದಂತೆ ಸಲಹೆ ನೀಡಿದ್ದರು. ಆದ್ದರಿಂದ ಬಾಲಕ ನನಗೆ ಸಹಾಯ ಮಾಡಿದ. ಅವನು ನಮ್ಮ ಕುಟುಂಬದ ಸದಸ್ಯನಿದ್ದಂತೆ~ ಎಂದು ಸ್ಪಷ್ಟನೆ ನೀಡಿದ್ದಾರೆ.