ಖಾನಾಪುರ: ದೂಧಸಾಗರ ಜಲಪಾತ ವೀಕ್ಷಿಸಲು ತೆರಳಿದ್ದ ಸಾವಿರಾರು ಪ್ರವಾಸಿಗರು ಮರಳಿ ಬರುವ ಸಂದರ್ಭದಲ್ಲಿ ರೈಲಿನಲ್ಲಿ ಜಾಗ ದೊರೆಯದೇ ಇದ್ದ ಪ್ರಯುಕ್ತ ಕೋಪಗೊಂಡು ಗೋವಾ ರಾಜ್ಯದ ವಾಸ್ಕೋ ನಿಲ್ದಾಣದಿಂದ ಹ. ನಿಜಾಮುದ್ದಿನ್ ನಿಲ್ದಾಣಕ್ಕೆ ತೆರಳುತ್ತಿದ್ದ ಗೋವಾ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಿದ ಪ್ರಸಂಗ ತಾಲ್ಲೂಕಿನ ಲೋಂಡಾ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಭಾನುವಾರ ಮಾತ್ರ ಲೋಂಡಾದಿಂದ ದೂಧಸಾಗರ ಕಡೆಗೆ ತೆರಳಲು ರೈಲಿನ ಅನುಕೂಲತೆ ಇದ್ದ ಪ್ರಯುಕ್ತ ಭಾನುವಾರ ಮುಂಜಾನೆಯ ಪುನಾ-ಎರ್ನಾಕುಲಂ ರೈಲಿನ ಮೂಲಕ ದೂಧಸಾಗರ ಜಲಪಾತ ವೀಕ್ಷಣೆಗೆ ಸಾವಿರಾರು ಪ್ರಯಾಣಿಕರು ತೆರಳಿದ್ದರು. ಮರಳಿ ಅಲ್ಲಿಂದ ಸಂಜೆ 4.30ಕ್ಕೆ ಹೊರಟ ಗೋವಾ ಎಕ್ಸ್ಪ್ರೆಸ್ ರೈಲಿನಲ್ಲಿ ಕೇವಲ 2 ಸಾಮಾನ್ಯ ಬೋಗಿಗಳಿದ್ದು, ರೈಲು ಏರಲು ಸೂಕ್ತ ಮೆಟ್ಟಿಲಿನ ವ್ಯವಸ್ಥೆ ಇರದ ಕಾರಣ ಈ ಪ್ರಯಾಣಿಕರು ರೈಲಿನಲ್ಲಿ ಏರಲು ಸಾಧ್ಯವಾಗದೇ ಆಕ್ರೋಶಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿಂದ ಹೊರಡಲು ಮುಂದಾದ ರೈಲಿಗೆ ಸಿಟ್ಟಿನಿಂದ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಆಗ ರೈಲಿನ ಹಿಂಭಾಗದ 2 ಎಸಿ ಕೋಚ್ಗಳ ಗಾಜಿಗೆ ಕಲ್ಲು ಸಿಡಿದು ಗಾಜುಗಳು ಪುಡಿಪುಡಿಯಾಗಿವೆ. ಈ ಬಗ್ಗೆ ರೈಲ್ವೆ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲವಾದರೂ ಒಡೆದ ಗಾಜು ಗಳನ್ನು ಹೊಂದಿದ ಸ್ಥಿತಿಯಲ್ಲಿ ರೈಲು ಪ್ರಯಾಣ ಮುಂದುವರಿಸಿದೆ ಎನ್ನಲಾಗಿದೆ