ದಾವಣಗೆರೆ: ವಿವಿಧ ಕಾರಣಗಳಿಗಾಗಿ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್ ತನಕ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಮೆಗಾ ಲೋಕ ಅದಾಲತ್ ನಡೆಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಪ್ರಚಾರ ಸಿಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಪ್ರಧಾನ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದ್ದ `ಮೆಗಾ ಲೋಕ ಅದಾಲತ್~ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀದೇವಿ ಎಸ್. ಅಂಗಡಿ ಮಾತನಾಡಿ, ಮೆಗಾ ಲೋಕ ಅದಾಲತ್ನಲ್ಲಿ 4 ತಿಂಗಳ ಅವಧಿಯಲ್ಲಿ ಒಟ್ಟು 1,512 ಪ್ರಕರಣ ಇತ್ಯರ್ಥವಾಗಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ. ತಿಮ್ಮೇಶ್ ಮಾತನಾಡಿ, ಲೋಕ ಅದಾಲತ್ ವ್ಯಾಪ್ತಿಗೆ ಸಿವಿಲ್ ವ್ಯಾಜ್ಯಗಳನ್ನೂ ಸೇರಿಸಬೇಕು. ಪ್ರಸ್ತುತ ಕ್ರಿಮಿನಲ್ ದಾವೆಗೆ ಸಂಬಂಧಿಸಿದಂತೆ ಮಾತ್ರ ಲೋಕ ಅದಾಲತ್ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ನಗರ ಡಿವೈಎಸ್ಪಿ ಕೆ.ಪಿ. ಚಂದ್ರಪ್ಪ ಅವರು ಮಾತನಾಡಿ, ವಿಳಂಬವಾಗಿ ನ್ಯಾಯ ಸಿಗುವುದನ್ನು ತಪ್ಪಿಸುವ ಮತ್ತು ಸಕಾಲದಲ್ಲಿ ಸೂಕ್ತ ನ್ಯಾಯ ಒದಗಿಸುವ ಲೋಕ ಅದಾಲತ್ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಶಾರದಾ ಉಪಸ್ಥಿತರಿದ್ದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕಂಟ್ರ್ಯಾಕ್ಟರ್ ಕಾರ್ಯಕ್ರಮ ನಿರೂಪಿಸಿದರು.