ಉಜ್ಜಯಿನಿ/ಮಧ್ಯಪ್ರದೇಶ (ಪಿಟಿಐ): ಉದ್ದೇಶಿತ ಲೋಕಪಾಲ ಮಸೂದೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ತರಬಾರದು ಎಂದು ಹೇಳಿಕೆ ನೀಡಿದ ಒಂದೇ ದಿನದಲ್ಲಿ ತಮ್ಮ ನಿಲುವಿನಿಂದ ಹಿಂದೆ ಸರಿದಿರುವ ಯೋಗ ಗುರು ಬಾಬಾ ರಾಮ್ದೇವ್ ಅವರು, ತಾವು ಅಂತಹ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.
ಜೂನ್ 4ರಿಂದ ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ತಾವು ನಡೆಸಲು ನಿರ್ಧರಿಸಿರುವ ಅನಿರ್ದಿಷ್ಟ ನಿರಶನ ಕೈಬಿಡುವಂತೆ ಸರ್ಕಾರ ವಿನಂತಿಸಿದ್ದರೂ ಸಹ, ನಿರಶನ ನಡೆಸುವುದಾಗಿ ಅವರು ಹೇಳಿದ್ದಾರೆ.
`ಪ್ರಧಾನ ಮಂತ್ರಿ ಮತ್ತು ಮುಖ್ಯ ನ್ಯಾಯಾಧೀಶರ ಹುದ್ದೆಗಳು ಪ್ರತಿಷ್ಠಿತವಾಗಿರುವ ಕಾರಣ ಇಬ್ಬರನ್ನೂ ಲೋಕಪಾಲ ಮಸೂದೆ ವ್ಯಾಪ್ತಿಯಲ್ಲಿ ತರುವುದು ಸೂಕ್ತವಲ್ಲ~ ಎಂದು ಹೇಳಿಯೇ ಇಲ್ಲ ಎಂದೂ ರಾಮ್ದೇವ್ ತಿಳಿಸಿದ್ದಾರೆ.
ಒಂದು ಲಕ್ಷ ಕಿ.ಮೀ ದೂರದ `ಭಾರತ ಸ್ವಾಭಿಮಾನ ಯಾತ್ರೆ~ ಅಂತ್ಯಗೊಳಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
`ಲೋಕಪಾಲ ಮಸೂದೆ ವ್ಯಾಪ್ತಿಯಲ್ಲಿ ಪ್ರಧಾನಿ ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ತರಬಾರದು ಎನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯ ಅಲ್ಲ~ ಎಂದ ಅವರು, ಈ ಹುದ್ದೆಗಳು ಪ್ರತಿಷ್ಠಿತವಾಗಿರುವ ಕಾರಣ ಲೋಕಪಾಲ ಮಸೂದೆ ವ್ಯಾಪ್ತಿಗೆ ಸೇರಿಸಬಾರದು ಎನ್ನುವ ಕುರಿತು ಸಾರ್ವಜನಿಕ ವಲಯದಲ್ಲಿ ಇಂತಹ ಚರ್ಚೆ ನಡೆಯುತ್ತಿದೆ ಎಂದರು.
ಮಧ್ಯ ಪ್ರದೇಶದ ಸೆಹೊರಿ ಜಿಲ್ಲೆಯಲ್ಲಿ ಮಂಗಳವಾರ ಮಾತನಾಡಿದ್ದ ರಾಮ್ದೇವ್ ಅವರು, `ಪ್ರಧಾನ ಮಂತ್ರಿ ಮತ್ತು ಮುಖ್ಯ ನ್ಯಾಯಮೂರ್ತಿಗಳು ಹುದ್ದೆಗಳು ಪ್ರತಿಷ್ಠಿತವಾಗಿದ್ದು, ಇಬ್ಬರನ್ನೂ ಲೋಕಪಾಲ ಮಸೂದೆ ವ್ಯಾಪ್ತಿಯಲ್ಲಿ ತರಬಾರದು~ ಎಂದಿದ್ದರು.