ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಕುಮಾರ್ ಶನಿವಾರ ನಾಮಪತ್ರ ಸಲ್ಲಿಸಿದರು.
ಆದರೆ ನಾಮಪತ್ರದೊಂದಿಗೆ ಸಲ್ಲಿಸಿದ `ಬಿ-ಫಾರ್ಮ್~ಗೆ ಸುನೀಲ್ ಕುಮಾರ್ ಸಹಿ ಮಾಡಿರಲಿಲ್ಲ.
ಪತ್ನಿ ಪ್ರಿಯಾಂಕ ಮತ್ತು ಬಿಜೆಪಿ ಹಿರಿಯ ಮುಖಂಡ ಸೋಮಶೇಖರ್ ಭಟ್ ಸೇರಿದಂತೆ ಕೆಲವೇ ಬೆಂಬಲಿಗರ ಜತೆ ಮಣಿಪಾಲದಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಬೆಳಿಗ್ಗೆ 11 ಗಂಟೆಗೆ ಆಗಮಿಸಿದ ಅವರು, ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎಂ.ಟಿ.ರೇಜು ಅವರಿಗೆ ನಾಮಪತ್ರ ಸಲ್ಲಿಸಿದರು. ನೀತಿ ಸಂಹಿತೆ ಕಾರಣವೊಡ್ಡಿ ಜಿಲ್ಲಾಧಿಕಾರಿ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಿದ್ದರು.
29ಕ್ಕೆ ಮತ್ತೆ ನಾಮಪತ್ರ: ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸುನೀಲ್ ಕುಮಾರ್, `ಅಪ್ಪ-ಅಮ್ಮನ ಅಪೇಕ್ಷೆ ಹಾಗೂ ಶನಿವಾರ ಬಹಳ ಶುಭ ದಿನ ಎಂಬ ಕಾರಣಕ್ಕೆ ನಾಮಪತ್ರ ಸಲ್ಲಿಸಿದೆ.
ಮುಂದಿನ ಬುಧವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೆ.ಎಸ್.ಈಶ್ವರಪ್ಪ ಮತ್ತಿತರ ಮುಖಂಡರು, ಕಾರ್ಯಕರ್ತರ ಜತೆಗೂಡಿ `ಬಿ-ಫಾರ್ಮ್~ ಸಹಿತ ಮತ್ತೆ ನಾಮಪತ್ರ ಸಲ್ಲಿಸುವೆ. ಗೆಲುವಿನ ನಿರೀಕ್ಷೆ ಇದೆ~ ಎಂದರು.