ನವದೆಹಲಿ (ಪಿಟಿಐ) : ತೀವ್ರ ಕುತೂಹಲ ಮೂಡಿಸಿರುವ 16ನೇ ಲೋಕಸಭೆ ಚುನಾವಣೆ ಫಲಿತಾಂಶ ಶುಕ್ರವಾರ ಹೊರಬೀಳಲಿದ್ದು, ದೇಶದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಭವಿಷ್ಯ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಲಿದೆ.
ಮತ ಎಣಿಕೆಗೆ ಸಕಲ ಸಿದ್ಧತೆ ನಡದಿದ್ದು, ಯಾವುದೇ ಸಮಸ್ಯೆ ಎದುರಾಗದು ಎಂದು ಚುನಾವಣಾ ಆಯುಕ್ತ ಎಚ್ ಎಸ್ ಬ್ರಹ್ಮ ತಿಳಿಸಿದ್ದಾರೆ.
ಲೋಕಸಭೆಯ 543 ಸ್ಥಾನಕ್ಕೆ 668 ಮಹಿಳಾ ಅಭ್ಯರ್ಥಿಗಳು, 3,234 ಪಕ್ಷೇತರರು ಸೇರಿದಂತೆ ಒಟ್ಟು 8251 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ದೇಶಾದ್ಯಂತ ಒಟ್ಟು 55 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 989 ಕೇಂದ್ರಗಳಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಬಿಜೆಪಿಯ ನರೇಂದ್ರ ಮೋದಿ, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ, ಜೆಡಿಯು ನಾಯಕ ಶರದ್ ಯಾದವ್, ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು ಹತ್ತು ಲಕ್ಷ ಸಿಬ್ಬಂದಿಗಳು ಮತ ಎಣಿಕೆ ಕಾರ್ಯದಲ್ಲಿ ತೊಡಗಲಿದ್ದು, ಹತ್ತು ಹಂತಗಳಲ್ಲಿ ಮತ ಎಣಿಕೆ ನಡೆಯಲಿದೆ. 10 ಸಾವಿರ ಪೊಲೀಸ್ ಮತ್ತು ಪ್ಯಾರಾಮಿಲಿಟರಿ ಸಿಬ್ಬಂದಿಗಳು ರಕ್ಷಣೆಗೆ ಸನ್ನದ್ಧರಾಗಿದ್ದಾರೆ.