ಭೋಪಾಲ್ (ಪಿಟಿಐ): ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವ ಭರವಸೆ ನೀಡಿದ್ದಾರೆ.
ಪಕ್ಷದ ಅಭೂತಪೂರ್ವ ಗೆಲುವಿನ ಶ್ರೇಯವನ್ನು ಅವರು ಪಕ್ಷದ ಕಾರ್ಯಕರ್ತರಿಗೆ ಸಲ್ಲಿಸಿದ್ದಾರೆ.
ಬಿಜೆಪಿಯು ರಾಜ್ಯದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಗದ್ದುಗೆ ಏರಲು ಪಕ್ಷದ ಸಂಘಟನಾ ವ್ಯವಸ್ಥೆ ಹಾಗೂ ಕಾರ್ಯಕರ್ತರೇ ಕಾರಣ ಎಂದು ಹೇಳಿದ ಶಿವರಾಜ್ ಸಿಂಗ್ ಚೌಹಾಣ್, ‘ನನ್ನ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ, ಪಕ್ಷ ಗೆಲುವು ಸಾಧಿಸುತ್ತಿತ್ತು’ ಎಂದು ಹೇಳಿದ್ದಾರೆ.
‘ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಹೋರಾಡುವಾಗ, ಉಳಿದ ಎಲ್ಲ ರಾಜ್ಯಗಳಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ-ಕೊಡಬೇಕು. ಅದಕ್ಕಾಗಿ ನಾವು ಕಷ್ಟಪಡ-ಬೇಕು’ ಎಂದು ಚೌಹಾಣ್ ಹೇಳಿದರು.
‘ಅದನ್ನು ಸಾಧಿಸುವುಕ್ಕೆ ಅಗತ್ಯವಾದ ಎಲ್ಲಾ ಶ್ರಮಗಳನ್ನು ನಾವು ಹಾಕುತ್ತೇವೆ. ಬಿಜೆಪಿ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳ ಪರವಾಗಿ ನಾನು ಇದನ್ನು ಹೇಳುತ್ತಿದ್ದೇನೆ’ ಎಂದೂ ಅವರು ಹೇಳಿದರು.
ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ರಾಜ್ಯದ ಉಸ್ತವರಿ ಹೊತ್ತಿದ್ದ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರಿಗೆ ಚೌಹಾಣ್ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ: ಕಾಂಗ್ರೆಸ್: ಜನಾದೇಶವನ್ನು ಒಪ್ಪಿಕೊಂಡಿರುವ ಕಾಂಗ್ರೆಸ್, ವಿಧಾನಸಭೆಯಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದೆ.
ರಾಜ್ಯದಲ್ಲಿ ಬಿಜೆಪಿಯು ಸತತ ಮೂರನೇ ಬಾರಿ ನಿಚ್ಚಳ ಬಹುಮತ ಪಡೆಯುವುದು ಖಚಿತವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ವಿರೋಧ ಪಕ್ಷದ ನಾಯಕ ಅಜಯ್ ಸಿಂಗ್, ‘ಪ್ರಬಲ ಪ್ರತಿಪಕ್ಷವಾಗಿ ನಮ್ಮ ಪಾತ್ರವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.
....
‘ಇದು ಬಿಜೆಪಿ. ಸಣ್ಣ ಕಾರ್ಯಕರ್ತರು ಕೂಡ ಇಲ್ಲಿ ದೊಡ್ಡ ಕೆಲಸ ಮಾಡುತ್ತಾರೆ. ಶಿವರಾಜ್ ಒಬ್ಬ ಸಾಮಾನ್ಯ ಕಾರ್ಯಕರ್ತ. ಚುನಾವಣೆ ಫಲಿತಾಂಶವು ಪಕ್ಷದ ಸಂಘಟನೆ ತೋರಿರುವ ಅದ್ಭುತ. ಶಿವರಾಜ್ನ ಸ್ಥಾನದಲ್ಲಿ ಬೇರೆಯಾರಿದ್ದರೂ ಬಿಜೆಪಿ ಗೆಲ್ಲುತಿತ್ತು. ಈ ಗೆಲುವು ರಾಜ್ಯದ ಜನರದ್ದು’
–ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.