ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಕುರಿತು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಅಹದ್ ಮತ್ತು ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ಡಿ.ಎಸ್. ರಾಜೇಂದ್ರ ವಿರುದ್ಧ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗೃಹ ಇಲಾಖೆ ನಿರ್ದೇಶನ ನೀಡಿದೆ.
ಆನೇಕಲ್ನ ಚಿಕ್ಕಹಾಗಡೆ ಗೇಟ್ ಚಂದಾಪುರ ರಸ್ತೆಯಲ್ಲಿನ ಖಾಸಗಿ ವಿಶ್ವ ವಿದ್ಯಾಲಯ ‘ಅಲೈಯನ್ಸ್ ಬಿಸಿನೆಸ್ ಸ್ಕೂಲ್’ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ನೂರಾರು ಕೋಟಿ ಹಣ ದುರ್ಬಳಕೆ ಮಾಡಿರುವ ಪ್ರಕರಣದ ಕುರಿತು ಗ್ರಾಮಾಂತರ ಎಎಸ್ಪಿ ಆಗಿದ್ದ ಅಬ್ದುಲ್ ಅಹದ್ ಮತ್ತು ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ಡಿ.ಎಸ್. ರಾಜೇಂದ್ರ ತನಿಖೆ ನಡೆಸುತ್ತಿದ್ದರು.
ನಿಯಮಾವಳಿ ಪ್ರಕಾರ ದಾಖಲೆಗಳನ್ನು ಸರ್ಕಾರಿ ಬರವಣಿಗೆ ತಜ್ಞರಿಂದ ಪರಿಶೀಲನೆ ಮಾಡಿಸಬೇಕಿದೆ. ಆದರೆ, ಎಎಸ್ಪಿ ಅಬ್ದುಲ್ ಅಹದ್ ಅವರ ನಿರ್ದೇಶನದಂತೆ ಇನ್ಸ್ಪೆಕ್ಟರ್ ರಾಜೇಂದ್ರ ಮುದ್ರಾ ಅಸೋಸಿಯೇಟ್ಸ್ ಎಂಬ ಖಾಸಗಿ ಸಂಸ್ಥೆಗೆ ಪರಿಶೀಲನೆಯ ಹೊಣೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪಿ. ಅರುಣ್, ಗೃಹ ಇಲಾಖೆಗೆ ದೂರು ನೀಡಿದ್ದರು.