ಬೆಂಗಳೂರು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ಕೋರ್ಟ್ನಲ್ಲಿ ಸರಿಯಾಗಿ ವಾದ ಮಂಡಿಸದೆ ಪ್ರಕರಣಗಳ ಅನಗತ್ಯ ಮುಂದೂಡಿಕೆಗೆ ಕಾರಣವಾಗುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಎಲ್.ಉಮಾಕಾಂತನ್ ಅವರು ಶನಿವಾರ ರಾಜೀನಾಮೆ ನೀಡಲಿದ್ದಾರೆ.
ಉಪಲೋಕಾಯುಕ್ತರ ಜೊತೆ ಶುಕ್ರವಾರ ಚರ್ಚಿಸಿದ ನಂತರ ಅವರು ಈ ನಿರ್ಧಾರಕ್ಕೆ ಬಂದಿರುವ ಬಗ್ಗೆ ಲೋಕಾಯುಕ್ತ ರಿಜಿಸ್ಟ್ರಾರ್ ಬಿ.ಯೋಗಿನಾಥ್ ದೃಢಪಡಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ವಾದ ಮಂಡಿಸಲು ಇವರು ನಿರಾಸಕ್ತಿ ತೋರುತ್ತಿರುವುದು, ಸಕಾಲಕ್ಕೆ ಕಲಾಪಕ್ಕೆ ಹಾಜರಾಗದೇ ಇರುವುದು, ಅನಗತ್ಯವಾಗಿ ವಿಚಾರಣೆಯ ಮುಂದೂಡಿಕೆ ಕೇಳುವುದು ಇತ್ಯಾದಿಗಳ ಬಗ್ಗೆ ಲೋಕಾಯುಕ್ತ ಕೋರ್ಟ್ನ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಷ್ಟೇ ಅಲ್ಲದೇ ಉಮಾಕಾಂತನ್ ಅವರ `ಕರ್ತವ್ಯಲೋಪ~ದ ಕುರಿತು ಆದೇಶದಲ್ಲಿಯೇ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.