ನವದೆಹಲಿ(ಐಎಎನ್ಎಸ್): ಸರ್ಕಾರದ ಜೊತೆ ಸಮಾಲೋಚನೆ ನಡೆಸದೇ ಗುಜರಾತ್ನಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಿರುವ ರಾಜ್ಯಪಾಲ ಕಮಲಾ ಬೇನಿವಾಲ್ ಕ್ರಮದ ಕುರಿತು ರಾಷ್ಟ್ರಪತಿ ಅವರು ಮಧ್ಯಪ್ರವೇಶಿಸಬೇಕೆಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಶುಕ್ರವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿದೆ.
~ರಾಜ್ಯದ ಮುಖ್ಯಮಂತ್ರಿ ಅಥವಾ ಸಚಿವ ಸಂಪುಟದ ಸಲಹೆಗಳನ್ನು ಕೇಳದೆ ರಾಜ್ಯಪಾಲರು ಈ ನೇಮಕದ ಆದೇಶ ಹೊರಡಿಸಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ರಾಷ್ಟ್ರಪತಿಯವರು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಕೆಂದು ಕೇಳಲು ನಾವು ಅವರನ್ನು ಸಂಪರ್ಕಿಸಿದೆವು~ ಎಂದು ಅಡ್ವಾಣಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
~ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸಮ್ಮತ್ತಿಯಿಲ್ಲದೆ ರಾಜ್ಯಪಾಲರು ಲೋಕಾಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ~ ಎಂದು ಅವರು ಹೇಳಿದರು.
ಲೋಕಾಯುಕ್ತ ನೇಮಕದ ವಿವಾದದಿಂದಾಗಿ ಶುಕ್ರವಾರ ಎರಡು ಸದನದ ಕಲಾಪಗಳಿಗೆ ಅಡ್ಡಿ ಉಂಟಾಯಿತು.
ಪಕ್ಷದ ಅಧ್ಯಕ್ಷ ನಿತೀನ್ ಗಡ್ಕರಿ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಅರುಣ್ ಜೆಟ್ಲಿ, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮ ಸ್ವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.