ಬೆಂಗಳೂರು (ಐಎಎನ್ಎಸ್): ಎರಡು ವಸತಿ ನಿವೇಶನಗಳನ್ನು ಹೊಂದಿರುವ ಬಗ್ಗೆ ತಮ್ಮ ಹಾಗೂ ತಮ್ಮ ಪತ್ನಿಯ ಮೇಲೆ ಬಂದ ಆರೋಪದ ಹಿನ್ನೆಲೆಯಲ್ಲಿ ಭುಗಿಲೆದ್ದ ವಿವಾದವನ್ನು ಅನುಸರಿಸಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿರೂಪಣ್ಣ ಪಾಟೀಲ್ ಅವರು ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಪಾಟೀಲ್ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ಸಲ್ಲಿಸಿದರು. ಇದರೊಂದಿಗೆ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರ ಉತ್ತರಾಧಿಕಾರಿಯಾಗಿ ಐದು ವರ್ಷಗಳ ಅವಧಿಗೆ ನೇಮಕಗೊಂಡ ಪಾಟೀಲ್ ಅವರ ಅಧಿಕಾರಾವಧಿ ಒಂದೂವರೆ ತಿಂಗಳಿಗೆ ಮುಕ್ತಾಯಗೊಂಡಿತು.
ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಾಟೀಲ್ ಅವರು ಲೋಕಾಯುಕ್ತರಾಗಿ ಆಗಸ್ಟ್ 3ರಂದು ಅಧಿಕಾರ ವಹಿಸಿಕೊಂಡಿದ್ದರು.