ಗಜೇಂದ್ರಗಡ: ಆಸ್ತಿಯನ್ನು ನೋಂದಾಯಿಸುವ ಪ್ರಕ್ರಿಯೆ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ವಿಶೇಷ ತಹಸೀಲ್ದಾರ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿಶೇಷ ತಹಸೀಲ್ದಾರ್ ಅಡಿವೆಪ್ಪ ಮಲ್ಲಪ್ಪ ಗಿರಿನಿವಾಸ ಅವರು ನಿಡಗುಂದಿಕೊಪ್ಪದ ಶಿವಾನಂದ ಸಿದ್ದಪ್ಪ ಸರ್ವಿ ಎಂಬುವರಿಂದ ಹದಿನೈದು ಸಾವಿರ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
28 ಎಕರೆ ಆಸ್ತಿಯ ಪಾಲುದಾರಿಕೆ ವಿಚಾರ ಕೋರ್ಟ್ನಲ್ಲಿ ಇತ್ಯರ್ಥವಾಗಿ ಶಿವಾನಂದ ಅವರಿಗೆ ಆಸ್ತಿಯ ಮೂರನೇಯ ಒಂದು ಭಾಗ ಬರಬೇಕು ಎಂದು ತೀರ್ಪು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಪಾಲಿನ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಲು ತಹಸೀಲ್ದಾರ್ ಕಚೇರಿಗೆ ಹೋದ ಸಂದರ್ಭದಲ್ಲಿ ಗಿರಿನಿವಾಸ ಅವರು 30 ಸಾವಿರ ರೂಪಾಯಿ ಲಂಚವನ್ನು ಕೇಳಿದ್ದರು ಎನ್ನಲಾಗಿದೆ.
ಕೊನೆಗೆ ರೂ15 ಸಾವಿರ ಲಂಚ ಕೊಡಲು ಒಪ್ಪಿದ ಶಿವಾನಂದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಗಿರಿನಿವಾಸ ಅವರ ಮನೆಗೆ ಹಣ ಕೊಡಲು ಹೋದಾಗ ಲೋಕಾಯುಕ್ತ ಡಿವೈಎಸ್ಪಿ ಜಿ.ಆರ್. ಪಾಟೀಲ ಮತ್ತು ಸಿಬ್ಬಂದಿ ಬಲೆ ಬೀಸಿ ವಿಶೇಷ ತಹಸೀಲ್ದಾರರನ್ನು ಹಿಡಿದಿದ್ದಾರೆ.