ಪಾವಗಡ: ಸರ್ವೆ ಇಲಾಖೆ ಇಬ್ಬರು ನೌಕರರು ಗುರುವಾರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಪಾವಗಡ ಸರ್ವೆ ಇಲಾಖೆ ಮೇಲ್ವಿಚಾರಕ ಹನುಮಂತರಾಜು ಹಾಗೂ ಮೋಜಿಣಿದಾರ ಎನ್.ಜಿ.ಸುರೇಶ್ ಲೋಕಾಯುಕ್ತ ಬಲೆಗೆ ಬಿದ್ದವರು.
ತಾಲ್ಲೂಕಿನ ರಾಯಚೆರ್ಲು ವೆಂಕಣ್ಣನಾಯ್ಡು ಅವರಿಗೆ ಗ್ರಾಮದ ಸರ್ವೆ ನಂ. 34ಪಿ, 53/274/ಪಿ, 154/ಪಿ ನಕಾಶೆ ಮಾಡಿಕೊಡಲು 2000 ರೂಪಾಯಿ ಲಂಚ ಕೇಳಿದ್ದು, ಎನ್.ಜಿ. ಸುರೇಶ್ ಗುರುವಾರ ಬೆಳಿಗ್ಗೆ ಹೊಟೇಲ್ನಲ್ಲಿ 2000 ರೂಪಾಯಿ ಲಂಚ ಪಡೆದು ಜೊತೆಯಲ್ಲಿದ್ದ ಸೂಪರ್ ವೈಜರ್ ಜೇಬಿಗೆ 500 ರೂಪಾಯಿ ಹಾಕುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿ ದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಮಗೆಣ್ಣನವರ್, ಇನ್ಸ್ಪೆಕ್ಟರ್ ಜಯಕುಮಾರ್. ಉಮಾಶಂಕರ್ ದಾಳಿಯಲ್ಲಿ ಭಾಗವಹಿಸಿದ್ದರು.
ಅಪಘಾತ: ಬೈಕ್ ಸವಾರ ಸಾವು
ಗುಬ್ಬಿ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ತಾಲ್ಲೂಕಿನ ಚಿಕ್ಕೋನಹಳ್ಳಿಪಾಳ್ಯ ಗೇಟ್ ಬಳಿ ನಡೆದಿದೆ.
ತೊಂಗನಹಳ್ಳಿ ಗ್ರಾಮದ ತೋಟದ ಮನೆಯ ವಾಸಿ ಹುಚ್ಚಪ್ಪ (35) ಮೃತಪಟ್ಟ ವ್ಯಕ್ತಿ. ಬೈಕ್ನಲ್ಲಿ ರಾತ್ರಿ ಗುಬ್ಬಿಗೆ ಊಟಕ್ಕೆ ಬಂದಿದ್ದು, ಹುಚ್ಚಪ್ಪ ಮತ್ತು ಗಂಗಾಧರ ಮರಳಿ ಗ್ರಾಮಕ್ಕೆ ಬರುವ ಸಂದರ್ಭ ಅಪಘಾತ ಸಂಭವಿಸಿದೆ. ಗಾಯಗೊಂಡ ಗಂಗಾಧರ ಅವರನ್ನು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಬ್ಬಿ ಪಿಎಸ್ಐ ಸಿ.ರಾಮಕೃಷ್ಣಯ್ಯ ದೂರು ದಾಖಲಿಸಿದ್ದಾರೆ.