ಹಾಸನ: `ಮೂರು ತಿಂಗಳ ಕಾಲ ಲೋಕಾಯುಕ್ತ ವರದಿಯನ್ನು ವೆಂಟಿಲೇಟರ್ನಲ್ಲಿಟ್ಟಿದ್ದ ಬಿಜೆಪಿ ಸರ್ಕಾರ ಗುರುವಾರ ಅದನ್ನು ಸ್ಮಶಾನಕ್ಕೆ ಕಳುಹಿಸಿದೆ. ಅಡ್ವಾಣಿಯವರ ರಥಯಾತ್ರೆ ಹಾಸನಕ್ಕೆ ಬರುವ ಮೊದಲೇ ಸರ್ಕಾರ ಸೂತಕ ಕಳೆದುಕೊಳ್ಳಬೇಕೆಂಬ ತವಕದಲ್ಲಿದೆ~ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಲೇವಡಿ ಮಾಡಿದ್ದಾರೆ.
ಗಣಿ ಅಕ್ರಮದ ಬಗ್ಗೆ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ನೀಡಿರುವ ವರದಿಯ ತಾಂತ್ರಿಕ ಅಂಶಗಳ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದ ಸಲಹೆ ಕೋರಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವ ಕ್ರಮಕ್ಕೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.
`ಒಬ್ಬ ಲೋಕಾಯುಕ್ತರು ನೀಡಿರುವ ವರದಿ ಬಗ್ಗೆ ಇನ್ನೊಬ್ಬ ಲೋಕಾಯುಕ್ತ ಅಥವಾ ಲೋಕಾಯುಕ್ತ ಸಂಸ್ಥೆ ಸ್ಪಷ್ಟನೆ ನೀಡಲು ಬರುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ವರದಿ ನೀಡಿದವರಿಂದಲೇ ಸ್ಪಷ್ಟನೆ ಪಡೆಯಬೇಕಾದರೆ ಮತ್ತೆ ಸಂತೋಷ ಹೆಗ್ಡೆ ಅವರನ್ನೇ ಕೇಳಬೇಕು. ಅವರು ನಿವೃತ್ತರಾಗಿ 3 ತಿಂಗಳಾಗಿದೆ. ಇಡೀ ವರದಿಯನ್ನು ಮೂಲೆಗೆ ಎಸೆಯುವುದು ಸರ್ಕಾರದ ಉದ್ದೇಶವೇ ವಿನಾ ಸ್ಪಷ್ಟನೆ ಕೇಳುವುದು ಅಲ್ಲವೇ ಅಲ್ಲ ಎಂದು ಆರೋಪಿಸಿದರು.