ಶ್ರೀರಂಗಪಟ್ಟಣ: `ಲೋಕಾಯುಕ್ತರ ನೇಮಕ ವಿಷಯದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯದಿಂದ ಜನರಲ್ಲಿ ಗೊಂದಲ ಮೂಡಿದ್ದು, ಗುಜರಾತ್ ಮಾದರಿಯಲ್ಲಿ ನಮ್ಮಲ್ಲೂ ರಾಜ್ಯಪಾಲರೇ ಲೋಕಾಯುಕ್ತರನ್ನು ನೇಮಿಸುವುದು ಒಳಿತು~ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಬುಧವಾರ ಇಲ್ಲಿ ಹೇಳಿದರು.
ರೈತಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ಜನಪರ ವೇದಿಕೆ ಏರ್ಪಡಿಸಿದ್ದ ಭ್ರಷ್ಟಾಚಾರ ವಿರುದ್ಧದ ಜನಜಾಗೃತಿ ಸಮಾವೇಶಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಗುಜರಾತ್ನಲ್ಲಿ 6 ವರ್ಷಗಳಿಂದ ಖಾಲಿ ಇದ್ದ ಲೋಕಾಯುಕ್ತ ಹುದ್ದೆಗೆ ಅಲ್ಲಿನ ರಾಜ್ಯಪಾಲರು ನೇಮಕ ಮಾಡಿದ್ದಾರೆ. ಇದನ್ನು ಅಲ್ಲಿನ ಹೈಕೋರ್ಟ್ ಎತ್ತಿ ಹಿಡಿದಿದೆ. ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಲಿ~ ಎಂದರು.
ವೇದಿಕೆಯಲ್ಲಿ ಮಾತನಾಡಿದ ಎ.ಕೆ.ಸುಬ್ಬಯ್ಯ, `ಬನ್ನೂರ್ಮಠ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿದ್ದು ಆ ಬಗ್ಗೆ ಅವರು ತಮ್ಮ ಪ್ರತಿಕ್ರಿಯೆ ನೀಡಬೇಕು. ಮುಖ್ಯಮಂತ್ರಿ ಸದಾನಂದಗೌಡ ಹಟ ಹಿಡಿಯದೆ ಆದಷ್ಟು ಶೀಘ್ರ ಉತ್ತಮರನ್ನು ಲೋಕಾಯುಕ್ತರ ಸ್ಥಾನಕ್ಕೆ ಸೂಚಿಸಬೇಕು. ಬನ್ನೂರ್ಮಠ ಅವರ ನೇಮಕ ಸಮ್ಮತವಲ್ಲ ಎನಿಸಿದರೆ ರಾಜ್ಯಪಾಲರು ಏಕೆ ಆ ಬಗೆಗಿನ ಕಡತವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿಲ್ಲ~ ಎಂದು ಪ್ರಶ್ನಿಸಿದರು.