ದಾವಣಗೆರೆ: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿಯನ್ನು ಸರ್ಕಾರ ಸ್ವೀಕರಿಸಿಯೂ ಇಲ್ಲ; ತಿರಸ್ಕರಿಸಿಯೂ ಇಲ್ಲ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಸಮೀಪದ ಕಾಡಜ್ಜಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಾಯುಕ್ತ ವರದಿಯಲ್ಲಿ 700 ಅಧಿಕಾರಿಗಳ ಮೇಲೆ ಆರೋಪ ಮಾಡಲಾಗಿದೆ ಹಾಗೂ ಅಧಿಕಾರೇತರರ ಮೇಲೂ ಆರೋಪವಿದೆ. ಆದರೆ, ಅಧಿಕಾರಿಗಳ ಹಾಗೂ ಅಧಿಕಾರೇತರರಲ್ಲಿ ಯಾವ ವಿವರಣೆಯೂ ಕೇಳದೆ ಲೋಕಾಯುಕ್ತ ವರದಿಯಲ್ಲಿ ಆರೋಪ ಮಾಡಲಾಗಿದೆ. ಆರೋಪಿಗಳಿಗೂ ವಿವರಣೆ ನೀಡುವ ಅವಕಾಶವನ್ನು ಲೋಕಾಯುಕ್ತರು ಕಲ್ಪಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.