ಬೆಂಗಳೂರು: ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಹಲವರಿಂದ ಹಣ ಪಡೆದು ವಂಚಿಸಿದ್ದ ಮುಕುಂದ್ (30) ಎಂಬಾತನನ್ನು ನಗರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
‘4ಡಿ ಟೆಕ್ನಾಲಜೀಸ್ ಲಿಮಿಟೆಡ್’ ಹೆಸರಿನ ಕಂಪೆನಿ ಆರಂಭಿಸಿದ್ದ ಮುಕುಂದ್, ನಿರುದ್ಯೋಗಿ ಪದವೀಧರರಿಗೆ ಐಬಿಎಂ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ನೇತ್ರಾವತಿ ಎಂಬುವರಿಗೆ ಐಬಿಎಂ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ಅವರಿಂದ ರೂ 1.25 ಲಕ್ಷ ಹಣ ಪಡೆದಿದ್ದ. ಬಳಿಕ ಅವರಿಗೆ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದ. ಈ ಬಗ್ಗೆ ನೇತ್ರಾವತಿ ಅವರು ಹನುಮಂತನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮುಕುಂದ್ ತನ್ನ ಸಹಚರರಾದ ನವೀನ್, ಯಶವಂತ್, ಸಂದೀಪ್, ಉತ್ಕರ್ಷ್ ಗುಪ್ತಾ, ಅನಿಲ್ ದೇಶ್ಮುಖ್ ಮತ್ತು ವಿಜಯ್ ಅನಂತ್ ಎಂಬುವರ ಜತೆ ಸೇರಿ ಹಲವರಿಗೆ ವಂಚಿಸಿದ್ದಾನೆ. ಇದಲ್ಲದೇ ಆರೋಪಿಗಳು ಹಲವು ಕಂಪೆನಿಗಳಿಂದ ಡೇಟಾ ಆಪರೇಟಿಂಗ್ ಸೇವೆ ಪಡೆದು ಅವರಿಗೆ ಹಣ ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ತನ್ನ ಕಂಪೆನಿಯನ್ನು ಮುಚ್ಚಿದ್ದ ಮುಕುಂದ್, ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಇತರೆ ಆರೋಪಿಗಳು ದೆಹಲಿ, ಮುಂಬೈ ಮತ್ತಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.