ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಮುಷ್ಕರಕ್ಕೆ ಅರ್ಜಿ ಸಲ್ಲಿಸಿಲ್ಲವೇಕೆ- ಹೈಕೋರ್ಟ್ ಪ್ರಶ್ನೆ:ಪ್ರತಿಭಟನೆ: ಕುಸ್ಮಾ, ಸರ್ಕಾರಕ್ಕೆ ನೋಟಿಸ್

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಸಂಘದ (ಕುಸ್ಮಾ) ವ್ಯಾಪ್ತಿಗೆ ಒಳಪಡುವ ಶಾಲೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡದ ಬಗ್ಗೆ ಮಾಹಿತಿ ಬಯಸಿರುವ ಹೈಕೋರ್ಟ್ ಈ ಸಂಬಂಧ ಸರ್ಕಾರ ಹಾಗೂ `ಕುಸ್ಮಾ~ಕ್ಕೆ ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದೆ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನ ವಿಚಾರದಲ್ಲಿ ಇರುವ ಗೊಂದಲಗಳನ್ನು ನಿವಾರಿಸುವಂತೆ ಕೋರಿ  `ಕುಸ್ಮಾ~ ನಡೆಸಿದ ಪ್ರತಿಭಟನೆ ವಿರುದ್ಧ ವಕೀಲ ಎಸ್.ವಾಸುದೇವ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

`ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಿರುವ `ಕುಸ್ಮಾ~, ಶಾಲೆಗಳಿಗೆ ರಜೆ ಘೋಷಿಸಿದೆ. ಅದರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಬೇಕು~ ಎನ್ನುವುದು ವಕೀಲರ ಕೋರಿಕೆಯಾಗಿತ್ತು. ಸಂಘವು ಈಗಾಗಲೇ ಬಂದ್ ವಾಪಸು ಪಡೆದಿದೆ ಎಂದು ಸರ್ಕಾರದ ಪರ ವಕೀಲ ದೇವದಾಸ್ ನ್ಯಾಯಮೂರ್ತಿಗಳ ಗಮನಕ್ಕೆ ತಂದರು. `ಸಂಘದ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿದೆಯೇ~ ಎಂದು ವಕೀಲರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅದಕ್ಕೆ ದೇವದಾಸ್ ಅವರು, `ಇಲ್ಲ. ಆ ರೀತಿಯ ಭರವಸೆ ಸರ್ಕಾರ ಕೊಟ್ಟಿಲ್ಲ~ ಎಂದರು. ಪ್ರತಿಭಟನೆ ಹಿಂದಕ್ಕೆ ಪಡೆದ ಕಾರಣ, ಅರ್ಜಿದಾರರ ಈ ಕೋರಿಕೆಯನ್ನು ಮಾನ್ಯ ಮಾಡಲಾಗದು ಎಂದು ಪೀಠ ಹೇಳಿತು.

`ಸಂವಿಧಾನದ 29 ಮತ್ತು 30ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತ ಅನುದಾನ ರಹಿತ ಶಾಲೆಗಳು ಕೂಡ ಸರ್ಕಾರದ ನಿಯಮಾವಳಿಗೆ ಬದ್ಧವಾಗಿರಬೇಕಾಗುತ್ತದೆ. ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಮೇಲೆ ಅದನ್ನು ಪಾಲನೆ ಮಾಡಿ ಎಂದು ನಾವು (ಹೈಕೋರ್ಟ್) ಹೇಳಲಾಗದು. ಅದನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ~ ಎಂದೂ ಇದೇ ವೇಳೆ ಪೀಠ ಹೇಳಿತು.

ಆಗೇಕೆ ಆಸಕ್ತಿ ಇರಲಿಲ್ಲ:  ವಕೀಲರಿಗೆ ಸಂಬಂಧಿಸಿದ ಉದ್ದೇಶಿತ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವಕೀಲರ ಪರಿಷತ್ತು ಇದೇ 11 ಮತ್ತು 12ರಂದು ದೇಶದಾದ್ಯಂತ ನ್ಯಾಯಾಂಗ ಕಲಾಪ ಬಹಿಷ್ಕರಿಸಿ ಮುಷ್ಕರ ನಡೆಸಿದ್ದ ಘಟನೆಯನ್ನು ಉಲ್ಲೇಖಿಸಿದ ನ್ಯಾ.ಸೇನ್ ಅವರು, `ಶಾಲೆಗಳನ್ನು ಮುಚ್ಚಿದ ತಕ್ಷಣ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಉತ್ಸುಕರಾಗುತ್ತೀರಿ. ಎರಡು ದಿನಗಳ ಕಾಲ ದೇಶದಾದ್ಯಂತ ನ್ಯಾಯಾಂಗ ಕಲಾಪ ಕುಂಠಿತಗೊಂಡಿತ್ತು. ಇದೇ ಆಸಕ್ತಿ, ಮುತುವರ್ಜಿ ಆಗ ನೀವೇಕೆ ತೋರಲಿಲ್ಲ~ ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲರ ಮೌನವೇ ಉತ್ತರವಾಯಿತು.

`ಉನ್ನತ ಮಟ್ಟದ ಸಮಿತಿ ರಚನೆ
ಬೆಂಗಳೂರು: `ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಗೊಂದಲ ನಿವಾರಣೆಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು~ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಅನುಷ್ಠಾನದ ಬಗ್ಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರ ಜೊತೆ ಗುರುವಾರ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
`ರಾಜ್ಯದಲ್ಲಿ ಆರ್‌ಟಿಇ ಕಾಯ್ದೆ ಅನುಷ್ಠಾನದ ವಿಚಾರವಾಗಿ ಉಂಟಾಗಿರುವ ಗೊಂದಲದ ಬಗ್ಗೆ ಸಮಿತಿಯನ್ನು ರಚಿಸಿ ಸಮಗ್ರ ಅಧ್ಯಯನ ನಡೆಸಲಾಗುವುದು.

ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘಗಳ ಸದಸ್ಯರು ಸಮಿತಿಯಲ್ಲಿರಲಿದ್ದಾರೆ~ ಎಂದು ಅವರು ಹೇಳಿದರು.`ಸಚಿವರು ಆರ್‌ಟಿಯ ಕಾಯ್ದೆಯ ಗೊಂದಲ ನಿವಾರಣೆಯ ಬಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಮಿತಿಯ ಅಧ್ಯಯನದ ನಂತರ ಕಾಯ್ದೆ ಅನುಷ್ಠಾನದ ಬಗ್ಗೆ ಇರುವ ಗೊಂದಲಗಳು ನಿವಾರಣೆಯಾಗುವ ವಿಶ್ವಾಸವಿದೆ~ ಎಂದು ರಾಜ್ಯ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಕಾರ್ಯದರ್ಶಿ ಎ.ಮರಿಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

 ಕರ್ನಾಟಕ ಸ್ವತಂತ್ರ ಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ (ಕೆಎಫ್‌ಐಎಎಂ) ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ, ರಾಜ್ಯ ಅಲ್ಪಸಂಖ್ಯಾತರ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT