ಜಮಖಂಡಿ: ವಕೀಲರ ಸೇವಾ ಕಾನೂನಿಗೆ ತಿದ್ದುಪಡಿ ತರುವ ಕೇಂದ್ರ ಸರಕಾರದ ಉದ್ದೇಶಿತ ಹೊಸ ನಿಯಮಾವಳಿಗಳನ್ನು ಕೈಬಿಡುವಂತೆ ಒತ್ತಾಯಿಸಿ ಇಲ್ಲಿನ ವಕೀಲರ ಸಂಘದ ಸದಸ್ಯರು ಗುರುವಾರ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು. ಉದ್ದೇಶಿತ ಹೊಸ ನಿಯಮಾವಳಿಗಳ ಮೂಲಕ ಸರಕಾರ ವಕೀಲರ ವಿರುದ್ಧ ಗದಾಪ್ರಹಾರ ಮಾಡುವ ಹುನ್ನಾರ ನಡೆಸಿದೆ. ಅದರಿಂದ ವಕೀಲರ ಘನತೆ ಮತ್ತು ಗೌರವಕ್ಕೆ ಕುಂದುಬರಲಿದೆ ಎಂದು ವಕೀಲರ ಸಂಘ ತನ್ನ ಕಳವಳ ವ್ಯಕ್ತಪಡಿಸಿದೆ.
ಹೊಸ ನಿಯಮಾವಳಿಗಳು ಜಾರಿಗೆ ಬಂದರೆ ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಮತ್ತು ಹೈಕೋರ್ಟ್ ನ್ಯಾಯಾಧೀಶರು ಅಧಿಕಾರ ಪಡೆಯಲಿದ್ದಾರೆ. ಪ್ರತಿ ವಕಾಲತ್ತು ಪತ್ರಕ್ಕೆ ರೂ.5 ರಂತೆ ವಕೀಲರ ಸಂಘಕ್ಕೆ ಸಂದಾಯ ಮಾಡುವ ಶುಲ್ಕದ ದರ ರೂ.25ಕ್ಕೆ ಏರಿಕೆಯಾಗಲಿದೆ ಎಂದು ತಿದ್ದುಪಡಿ ವಿಧೇಯಕವನ್ನು ಖಂಡಿಸಿದರು.ಉದ್ದೇಶಿತ ನಿಯಮಗಳ ಕುರಿತು ಸಂಸತ್ತಿನಲ್ಲಿ ಈಗಾಗಲೇ ಮಂಡಿಸಲಾಗಿದೆ. ಆದರೆ ಹೊಸ ನಿಯಮಾವಳಿಗಳು ವಕೀಲರ ವೃತ್ತಿಗೆ ಬಾಧಕ ಆಗಲಿವೆ ಎಂಬುದು ವಕೀಲರ ಸಂಘದ ಅಭಿಪ್ರಾಯವಾಗಿದೆ.
ಉದ್ದೇಶಿತ ಕಾನೂನು ತಿದ್ದುಪಡಿ ಕ್ರಮವನ್ನು ಕೈಬಿಡುವಂತೆ ಒತ್ತಾಯಿಸಿ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅವರಿಗೆ ಇಲ್ಲಿನ ಕಂದಾಯ ಉಪವಿಭಾಗಾಧಿಕಾರಿ ಡಾ.ಕೆ. ರಾಜೇಂದ್ರ ಅವರ ಮೂಲಕ ಮನವಿ ಸಲ್ಲಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎನ್.ಎಸ್. ದೇವರವರ, ಕಾರ್ಯದರ್ಶಿ ಸಿಗ್ವಿಜಯ ಬಾಂಗಿ, ಸಹ ಕಾರ್ಯದರ್ಶಿ ಕುಂಬಾರ, ಸದಸ್ಯರಾದ ಟಿ.ಎಲ್. ಖವಟಕೊಪ್ಪ, ಎಸ್.ಆರ್. ಕೋಪರ್ಡೆ, ಎಸ್.ಜಿ.ಭೂಮಾರ, ವಿ.ವಿ. ತುಳಸಿಗೇರಿ, ಆರ್.ಜಿ. ತುಕ್ಕಪ್ಪನವರ, ಪಾರಶೆಟ್ಟಿ ಮತ್ತಿತರರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.