ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಅಬ್ದುಲ್ ರಿಯಾಜ್ ಖಾನ್ ಅವರ ಮನೆಯ ಬಾಗಿಲು ಮುರಿದು ದುಷ್ಕರ್ಮಿಗಳು ₨ 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಇಂದಿರಾನಗರದಲ್ಲಿ ಭಾನುವಾರ ನಡೆದಿದೆ.
ಇಂದಿರಾನಗರ 13ನೇ ಅಡ್ಡರಸ್ತೆಯ ನಿವಾಸಿ ರಿಯಾಜ್ ಖಾನ್ ಅವರು ಭಾನುವಾರ ಸಂಜೆ 4 ಗಂಟೆಗೆ ಕುಟುಂಬ ಸದಸ್ಯರ ಜತೆಗೆ ದೊಮ್ಮಲೂರು ಸಮೀಪದ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆಗೆ ಅವರು ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಮನೆಯ ಮುಂಬಾಗಿಲು ಮುರಿದು ಆರು ಚಿನ್ನದ ಬಳೆ, ಒಂದ ಚಿನ್ನದ ಸರ, ಒಂದು ಚಿನ್ನದ ಉಂಗುರ, ಒಂದು ಜೊತೆ ಕಿವಿಯ ಓಲೆ ಹಾಗೂ ₨ 50 ಸಾವಿರ ನಗದು ದೋಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.