ಗದಗ: ನಗರದ ತೋಂಟದಾರ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ವಿದ್ಯಾರ್ಥಿಗಳಿಗೆ ವಚನ ವಿಶ್ಲೇಷಣೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಲೆಕ್ಕ ಪರಿಶೋಧಕ ಕೆ.ಎಸ್. ಚಟ್ಟಿ ಸ್ಪರ್ಧೆ ಉದ್ಘಾಟಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿ-ಸಂಸ್ಕಾರದಿಂದ ನಡೆಯಬೇಕು. ಮಕ್ಕಳು ನಿತ್ಯ ಜೀವನದಲ್ಲಿ ಆರ್ಥಿಕ ವ್ಯವಸ್ಥೆಯ ಬಗ್ಗೆ ತಿಳಿದಿಕೊಳ್ಳುತ್ತಾ ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ವ್ಯವಹಾರ ಜ್ಞಾನವನ್ನು ಪಡೆಯಬೇಕು ಎಂದರು.
ಸಂಸ್ಥೆ ಕಾರ್ಯದರ್ಶಿ ಎಂ.ಎ.ಹಂಚಿನಾಳ ಮಾತನಾಡಿ, ವಚನಗಳು ಸಂಸತ್ತಿನ ನಿಯಮಗಳಾಗಿವೆ. ಆದ್ದರಿಂದ ಪ್ರತಿಯೊಬ್ಬರು ವಚನಗಳನ್ನು ಅಧ್ಯಯನ ಮಾಡಿ ಬದುಕು ಸಾಗಿಸಬೇಕು. ಕಠಿಣವಾದ ವಿಷಯವನ್ನು ವಚನಗಳನ್ನು ಅಧ್ಯಯನ ಮಾಡುವುದರ ಮೂಲಕ ಸರಳೀಕರಣ ಮಾಡಿಕೊಳ್ಳಬಹುದು. ಪ್ರತಿಯೊಂದು ವಚನಗಳು ಅರ್ಥ ಗರ್ಭಿತವಾಗಿರುತ್ತವೆ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ದಾನಪ್ಪ ತಡಸದ ಬಸವಣ್ಣನ ವಚಗಳನ್ನು ಹಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಭಾಗದ ಪರಿವೀಕ್ಷಕ ದಾಸರ ಮಾತನಾಡಿದರು. ಸ್ಪರ್ಧೆಯಲ್ಲಿ 80ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಯೊಬ್ಬರು ಬಸವಣ್ಣನವರ ವೇಷ ಧರಿಸುವ ಮೂಲಕ ವಚನ ವಿಶ್ಲೇಷಣೆ ಮಾಡಿದ್ದ ವಿಶೇಷವಾಗಿತ್ತು.
ಸಂಸ್ಥೆ ಸದಸ್ಯರಾದ ಅಮರೇಶ ಅಂಗಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ವೃತ್ತಿ ಶಿಕ್ಷಣ ವಿಭಾಗದ ಪರಿವೀಕ್ಷಕ ಆರ್.ಎಸ್. ತ್ರಿಮಲ್ಲೆ ಹಾಜರಿದ್ದರು. ಕೊಟ್ರೇಶ ಮೆಣಸಿನಕಾಯಿ ನಿರೂಪಿಸಿದರು, ನಾಗರಾಜ ಗಾಳಿ ಸ್ವಾಗತಿಸಿದರು.