ಮಂಡ್ಯ: `ಮನೆಮನೆಗಳಲ್ಲಿ ವಚನಧಾರೆ ಕಾರ್ಯಕ್ರಮ ಸಂಘಟಿಸುವ ಮೂಲಕ ಸಮಾಜಕ್ಕೆ ವಚನಗಳ ಸಂದೇಶ ತಲುಪಿಸುವ ಕಾರ್ಯ ಶ್ಲಾಘನೀಯ~ ಎಂದು ಪಿಇಟಿ ಅಧ್ಯಕ್ಷ ಎಚ್.ಡಿ. ಚೌಡಯ್ಯ ಹೇಳಿದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಭಾನುವಾರ ಮಂಡ್ಯದಲ್ಲಿ ವಕೀಲ ಬಸವಯ್ಯ ಅವರ ನಿವಾಸದಲ್ಲಿ ಆಯೋಜಿಸಿದ್ದ `ಮನೆಮನೆಯಲ್ಲಿ ವಚನಧಾರೆ~ ಸರಣಿಯ 25ನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಭಾಂಜಲಿ ಅಕಾಡೆಮಿಯು ಆಯೋಜಿಸುತ್ತಿರುವ ಮಾಸಿಕ ಕಾರ್ಯಕ್ರಮ ಈ ಮೂಲಕ 25ನೇ ಸರಣಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ರಾಯಚೂರಿನ ಅಂಬಯ್ಯ ನುಲಿ ಮತ್ತು ಬೆಂಗಳೂರಿನ ಸೀಮಾ ರಾಯ್ಕರ್ ಅವರು ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸುವ ಮೂಲಕ 25ನೇ ಕಾರ್ಯಕ್ರಮಕ್ಕೆ ವಿಶೇಷತೆ ತಂದುಕೊಟ್ಟರು.
ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ, ಕವಯತ್ರಿ ಭವಾನಿ ಲೋಕೇಶ್, ವಕೀಲ ಬಸವಯ್ಯ, ಪಿಇಟಿ ಸಂಸ್ಥೆಯ ಅಧ್ಯಕ್ಷ ಎಚ್.ಡಿ.ಚೌಡಯ್ಯ, ಶರಣ ಸಾಹಿತ್ಯಪರಿಷತ್ತಿನ ಶಿವಪ್ರಕಾಶ್, ಜಂಗಮ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮತ್ತು ಅಕಾಡೆಮಿ ಡೇವಿಡ್, ಪತ್ರಕರ್ತ ರವೀಂದ್ರ ಭಟ್ ಹಾಜರಿದ್ದರು.