ಪಟ್ನಾ (ಐಎಎನ್ಎಸ್): ವರದಕ್ಷಿಣೆ ಪಿಡುಗು ತೊಡೆದುಹಾಕುವ ನಿಟ್ಟಿನಲ್ಲಿ ಬಿಹಾರದ ಮುಸ್ಲಿಂ ಧಾರ್ಮಿಕ ನಾಯಕರು ನಿರ್ಧಾರ ಕೈಗೊಂಡಿದ್ದು, ವರದಕ್ಷಿಣೆ ಕೇಳುವ ಮತ್ತು ಕೊಡುವವರ ವಿವಾಹದಲ್ಲಿ (ನಿಖಾ) ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ..
ಮುಸ್ಲಿಮರಲ್ಲಿ ವರದಕ್ಷಿಣೆ ಪಿಡುಗು ಅವ್ಯಾಹತವಾಗಿ ವ್ಯಾಪಿಸುತ್ತಿರುವುದರಿಂದ ಬಿಹಾರದ ನಳಂದಾ ಜಿಲ್ಲೆಯ ಮುಸ್ಲಿಂ ಧಾರ್ಮಿಕ ನಾಯಕರ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ.
‘ಯಾರು ವರದಕ್ಷಿಣೆ ಕೇಳುತ್ತಾರೊ ಮತ್ತು ಕೊಡುತ್ತಾರೊ ಅಂತಹವರ ಮದುವೆ ನಡೆಸಿಕೊಡಬಾರದೆಂದು ನಿರ್ಧರಿಸಿದ್ದೇವೆ. ವರದಕ್ಷಿಣೆ ಪಿಡುಗನ್ನು ತೊಡೆದುಹಾಕಲು ಮತ್ತು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆ’ ಎಂದು ನಳಂದಾದ ಇಮಾರತೆ ಶರಿಯಾದ ಮುಖ್ಯಸ್ಥ ಕ್ವಾಜಿ ಮೌಲಾನ ಮನ್ಸೂರ್ ಆಲಮ್ ತಿಳಿಸಿದ್ದಾರೆ.