ನವದೆಹಲಿ (ಪಿಟಿಐ): ಸಮಾಜದಲ್ಲಿ ವರದಕ್ಷಿಣೆ ಸಂಸ್ಕೃತಿ ಬೆಳೆಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ದೃಢವಾಗಿ ನಿಭಾಯಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣ ದಾಖಲಿಸುವಾಗ ವಿಳಂಬವಾಗಿದೆ ಎಂಬ ಕಾರಣಕ್ಕೆ ಮಹಿಳೆಯರು ನೀಡುವ ವರದಕ್ಷಿಣೆ ಕಿರುಕುಳದ ದೂರುಗಳನ್ನು ಕೋರ್ಟ್ಗಳು ವಜಾಗೊಳಿಸಬಾರದು ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.
ವರದಕ್ಷಿಣೆ ನಾಚಿಕೆಗೇಡು ಮತ್ತು ಯಾತನಾಮಯವಾದ ವಾಸ್ತವ ಎಂದು ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್ ಮತ್ತು ವಿಕ್ರಮಜಿತ್ ಸೇನ್ ಅವರನ್ನೊಳಗೊಂಡ ಪೀಠ ಹೇಳಿದೆ.
ವರದಕ್ಷಿಣೆ ಕಿರುಕುಳ ವಿರುದ್ಧದ ಸಜೆ ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದೂ ಪೀಠ ಹೇಳಿದೆ. ವರದಕ್ಷಿಣೆಯ ನಾಚಿಕೆಗೇಡು ಮತ್ತು ವೇದನಾಮಯ ವಾಸ್ತವದ ಬಗ್ಗೆ ನ್ಯಾಯಾಧೀಶರು ಕುರುಡಾಗಬಾರದು ಎಂದು ಪೀಠ ಸಲಹೆ ನೀಡಿದೆ. ಈ ಪಿಡುಗು ಎಲ್ಲ ಧಾರ್ಮಿಕ ಸಮುದಾಯಗಳಲ್ಲೂ ಹರಡುತ್ತಿರುವ ಬಗ್ಗೆ ಪೀಠ ಕಳವಳ ವ್ಯಕ್ತಪಡಿಸಿದೆ.
ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣವನ್ನು ಕೈಬಿಡುವಂತೆ ಆರೋಪಿ ಮತ್ತು ಆತನ ಕುಟುಂಬ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪೀಠ ಈ ತೀರ್ಪು ನೀಡಿದೆ. ಅರ್ಜಿಯನ್ನು ವಜಾಗೊಳಿಸಿ ಪ್ರಕರಣದ ತನಿಖೆ ಮುಂದುವರಿಸಲು ಕೋರ್ಟ್ ಆದೇಶಿಸಿದೆ.