ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವರದಕ್ಷಿಣೆ ಪಿಡುಗು ತೊಡೆದು ಹಾಕಿ'

Last Updated 20 ಡಿಸೆಂಬರ್ 2012, 7:18 IST
ಅಕ್ಷರ ಗಾತ್ರ

ಬೀದರ್: ವರದಕ್ಷಿಣೆ ಪಿಡುಗನ್ನು ತೊಡೆದು ಹಾಕುವ ಅಗತ್ಯವಿದೆ ಎಂದು ಹೈದರಾಬಾದ್‌ನ ವರದಕ್ಷಿಣೆ ವಿರೋಧಿ ಹೋರಾಟಗಾರ ಅಲೀಮ್‌ಖಾನ್ ಫಲ್ಕಿ ಅಭಿಪ್ರಾಯಪಟ್ಟರು.

ಸರಳ ವಿವಾಹ ಕುರಿತು ನಗರದ ಬಿ.ವಿ.ಬಿ. ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರದಕ್ಷಿಣೆ ಸಮಾಜಕ್ಕೆ ಅಂಟಿಕೊಂಡಿರುವ ದೊಡ್ಡ ಪಿಡುಗಾಗಿದೆ. ಇದು, ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತಿತರ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ. ಪ್ರಸ್ತುತ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದ್ದರೂ, ವರದಕ್ಷಿಣೆ ಭಾರತೀಯರನ್ನು ಬಡವರನ್ನಾಗಿ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವರದಕ್ಷಿಣೆಯು ಪಾಲಕರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ. ಆತ್ಮಹತ್ಯೆ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಮಕ್ಕಳ ಮದುವೆಗಾಗಿ ಪಾಲಕರು ಸಾಲ ಮಾಡುವ, ಮನೆ, ಆಸ್ತಿಗಳನ್ನು ಅಡವು ಇಡುವ ಪರಿಸ್ಥಿತಿ ಎದುರಾಗುತ್ತಿವೆ ಎಂದು ಹೇಳಿದರು.

ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ವರದಕ್ಷಿಣೆಯನ್ನು ತೊಡೆದು ಹಾಕಲು ಸಂಕಲ್ಪ ತೊಡಬೇಕು ಎಂದು ಸಲಹೆ ಮಾಡಿದರು.

2013ನೇ ವರ್ಷವನ್ನು ಸರಳ ವಿವಾಹ ವರ್ಷವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ತಿಳಿಸಿದರು.

ಸರಳ ವಿವಾಹ ವರ್ಷಾಚರಣೆ ಅಂಗವಾಗಿ ನಗರದಲ್ಲಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಿ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ವರದಕ್ಷಿಣೆ ಹಾಗೂ ವೈಭವದ ಮದುವೆಗಳು ಪಾಲಕರ ನೆಮ್ಮದಿ ಹಾಳುಗೆಡವುತ್ತಿವೆ. ವರದಕ್ಷಿಣೆ ರಹಿತ ಸರಳ ವಿವಾಹಗಳಿಂದ ಮಾತ್ರ ಜೀವನ ಸುಖಮಯ ಆಗಲು ಸಾಧ್ಯ ಎಂದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಬಸವರಾಜ ಜಾಬಶೆಟ್ಟಿ, ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚನ್ನಬಸಪ್ಪ ಹಾಲಹಳ್ಳಿ, ಬಿ.ವಿ.ಬಿ. ಪದವಿ ಕಾಲೇಜು ಪ್ರಾಚಾರ್ಯ ಅಫ್ರೋಜ್ ಪಾಷಾ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT