ಹುಮನಾಬಾದ್: ನೀರು ಪರೀಕ್ಷಾ ವರದಿ ಬರುವವರೆಗೆ ವಾಂತಿಭೇದಿಗೆ ಕಾರಣವಾಗಿದೆ ಎನ್ನಲಾಗುತ್ತಿರುವ ಧುಮ್ಮನಸೂರಿನ ಕೊಳ್ಕುರೆ ಬಾವಿ ನೀರಿನ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಅನೀಲ ಚಿಂತಾಮಣಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿದ ಅವರು `ಪ್ರಜಾವಾಣಿಗೆ' ತಿಳಿಸಿದರು.
ಈ ಬಾವಿನೀರನ್ನು ಸೋಮವಾರವೇ ಪರೀಕ್ಷೆಗಾಗಿ ಬೀದರ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶುದ್ಧಿಕರಣಕ್ಕಾಗಿ ಬಾವಿಯಲ್ಲಿ ಬ್ಲಿಚಿಂಗ್ ಪೌಡರ್ ಹಾಕಲಾಗಿದೆ. ಇನ್ನು ವಾರದವರೆಗೆ ಈ ನೀರನ್ನು ಬಳಸುವಂತಿಲ್ಲ ಎಂದರು.
ಮಳಗಾಲದ ಕಾರಣ ಬಾವಿಯಲ್ಲಿ ಅಶುದ್ಧ ನೀರು ಶೇಖರಣೆಗೊಂಡಿರಬಹುದು ಮಳೆಯಿಂದಾಗಿ ತುಂಬಿದ ಹೊಸನೀರು ಸಹ ವಾಂತಿಭೇದಿಗೆ ಕಾರಣವಾಗಿರಬಹುದು ಎಂದ ಅವರು ಖಚಿತವಾಗಿ ಕಾರಣ ಹೇಳಲು ಆಗುವುದಿಲ್ಲ ಎಂದು ತಿಳಿಸಿದರು. ಗ್ರಾಮದಲ್ಲಿ ಬೇರೆಲ್ಲಿಂದ ನೀರನ್ನು ತಂದರೂ ಕಡ್ಡಾಯವಾಗಿ ಕಾಸಿ, ಸೋಸಿ, ಆರಿಸಿಯೇ ಕುಡಿಯುವಂತೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಇಲಾಖೆಯ ಮಲ್ಲಿಕಾರ್ಜುನ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅವಿನಾಶ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಕರಂದ ಕುಲಕರ್ಣಿ ಹಾಗೂ ಗ್ರಾಮಸ್ಥರು ಇದ್ದರು.